ಮೆಲ್ಬೋರ್ನ್: ಸತತ ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವ ಟೀಮ್ ಇಂಡಿಯಾ, ಮಗದೊಂದು ಆಘಾತಕ್ಕೊಳಗಾಗಿದೆ.ಆಸ್ಟ್ರೇಲಿಯಾ ವಿರುದ್ದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಗಾಯದ ಸಮಸ್ಯೆಗೊಳಗಾಗಿರುವ ಬಲಗೈ ವೇಗದ ಬೌಲರ್ ಉಮೇಶ್ ಯಾದವ್ ಸೇವೆಯಿಂದ ಟೀಮ್ ಇಂಡಿಯಾ ವಂಚಿತವಾಗಿದೆ.
ಮೂರನೇ ದಿನದಾಟದಲ್ಲಿ ಬೌಲಿಂಗ್ ವೇಳೆಯಲ್ಲಿ ಉಮೇಶ್ ಯಾದವ್ಗೆ ಗಾಯದ ತೊಂದರೆ ಕಾಡಿತ್ತು. ಫಿಸಿಯೋ ನೆರವಿಗೆ ಧಾವಿಸಿದರೂ ಮೀನಖಂಡದ ನೋವಿಗೊಳಗಾದ ಉಮೇಶ್ ತಕ್ಷಣ ಮೈದಾನ ತೊರೆದರು.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಸಿಸಿಐ, ಉಮೇಶ್ ಯಾದವ್ ತಮ್ಮ ನಾಲ್ಕನೇ ಓವರ್ ಬೌಲಿಂಗ್ ಮಾಡುವಾಗ ಮೀನಖಂಡ ನೋವಿಗೊಳಗಾಗಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡವು ಮೇಲ್ವಿಚಾರಣೆ ನೋಡಿಕೊಂಡಿದ್ದು, ಸ್ಕ್ಯಾನ್ ಮಾಡಲು ಕರೆದೊಯ್ಯಲಾಗಿದೆ ಎಂದಿದೆ.
ಎರಡನೇ ಇನ್ನಿಂಗ್ಸ್ ಆರಂಭದಲ್ಲೇ ಆಸ್ಟ್ರೇಲಿಯಾ ಓಪನರ್ ಜೋ ಬರ್ನ್ಸ್ ವಿಕೆಟ್ ಪಡೆದಿರುವ ಉಮೇಶ್ ಭಾರತಕ್ಕೆ ಬ್ರೇಕ್ ನೀಡುವಲ್ಲಿ ಯಶಸ್ವಿಯಾದರು.
Umesh Yadav complained of pain in his calf while bowling his 4th over and was assessed by the BCCI medical team. He is being taken for scans now. #AUSvIND pic.twitter.com/SpBWAOEu1x
— BCCI (@BCCI) December 28, 2020
ಆದರೆ ತಮ್ಮ ನಾಲ್ಕನೇ ಓವರ್ನಲ್ಲಿ ಗಾಯದ ಸಮಸ್ಯೆ ಎದುರಿಸಬೇಕಾಯಿತು. ಬಳಿಕ ಉಮೇಶ್ ಓವರ್ ಅನ್ನು ಡೆಬ್ಯು ವೇಗಿ ಮೊಹಮ್ಮದ್ ಸಿರಾಜ್ ಪೂರ್ಣಗೊಳಿಸಿದರು.
3.3 ಓವರ್ನಲ್ಲಿ 5 ರನ್ ತೆತ್ತಿರುವ ಉಮೇಶ್ ಯಾದವ್, ಒಂದು ವಿಕೆಟ್ ಕಬಳಿಸಿದರು.
ಗಾಯದಿಂದಾಗಿ ಭಾರತ ಈಗಾಗಲೇ ಅನುಭವಿ ವೇಗಿಗಳಾದ ಇಶಾಂತ್ ಶರ್ಮಾ ಹಾಗೂ ಮೊಹಮ್ಮದ್ ಶಮಿ ಸೇವೆಯಿಂದ ವಂಚಿವಾಗಿದೆ. ಇಶಾಂತ್ ಸರಣಿಗೆ ಅಲಭ್ಯವಾಗಿದ್ದರೆ ಶಮಿ, ಪ್ರಥಮ ಟೆಸ್ಟ್ ಪಂದ್ಯದ ವೇಳೆ ಗಾಯದಿಂದಾಗಿ ಹೊರಗುಳಿದಿದ್ದರು. ಈಗ ಉಮೇಶ್ ಸಹ ಗಾಯಕ್ಕೆ ತುತ್ತಾಗಿರುವುದು ಟೀಮ್ ಇಂಡಿಯಾಗೆ ಹಿನ್ನಡೆಯಾಗಿ ಪರಿಣಮಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.