ಮೆಲ್ಬೋರ್ನ್: ಮೊದಲ ಇನ್ನಿಂಗ್ಸ್ನಲ್ಲಿ 131 ರನ್ ಹಿನ್ನೆಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ, ಮೂರನೇ ದಿನದಾಟದ ಚಹಾ ವಿರಾಮದ ಹೊತ್ತಿಗೆ 28 ಓವರ್ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿದೆ.
ಇದರೊಂದಿಗೆ ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ತನ್ನ ಹಿಡಿತವನ್ನು ಬಿಗುಗೊಳಿಸಿದೆ. ಇನ್ನೊಂದೆಡೆ ಆಸ್ಟ್ರೇಲಿಯಾ 66 ರನ್ ಹಿನ್ನಡೆಯಲ್ಲಿದೆ. ಈ ಮಧ್ಯೆ ಗಾಯದ ಸಮಸ್ಯೆಗೊಳಗಾಗಿರುವ ಉಮೇಶ್ ಯಾದವ್ ಸೇವೆಯಿಂದ ಟೀಮ್ ಇಂಡಿಯಾ ವಂಚಿತವಾಗಿದೆ.
ಈಗ ಕ್ರೀಸಿನಲ್ಲಿರುವ ಮ್ಯಾಥ್ಯೂ ವೇಡ್ (27*) ಹಾಗೂ ಸ್ಟೀವನ್ ಸ್ಮಿತ್ (6*) ದಿನದ ಅಂತಿಮ ಅವಧಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಈ ಮೊದಲು ನಾಯಕ ಅಜಿಂಕ್ಯ ರಹಾನೆ ಆಕರ್ಷಕ ಶತಕ (112) ಹಾಗೂ ರವೀಂದ್ರ ಜಡೇಜ ಅರ್ಧಶತಕದ (57) ಬೆಂಬಲದೊಂದಿಗೆ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 115.1 ಓವರ್ಗಳಲ್ಲಿ 326 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತ್ತು.
ಈ ಮೂಲಕ ಮೊದಲ ಇನ್ನಿಂಗ್ಸ್ನಲ್ಲಿ 131 ರನ್ಗಳ ಮಹತ್ವದ ಮುನ್ನಡೆ ಗಳಿಸಿದೆ. ಊಟದ ವಿರಾಮಕ್ಕೆ ಕೆಲವೇ ಕ್ಷಣಗಳಿರುವಾಗ ಭಾರತ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತ್ತು.
That is an unbelievable yorker from Bumrah - that goes unrewarded!
— cricket.com.au (@cricketcomau) December 28, 2020
Live #AUSvIND: https://t.co/0nwGP4uO49 pic.twitter.com/KHjMB9z4Mq
277ಕ್ಕೆ 5 ಎಂಬಲ್ಲಿದ್ದ ಮೂರನೇ ದಿನದಾಟ ಮುಂದುವರಿಸಿದ ನಾಯಕ ಅಜಿಂಕ್ಯ ರಹಾನೆ ಹಾಗೂ ರವೀಂದ್ರ ಜಡೇಜ ತಂಡದ ಮುನ್ನಡೆಯನ್ನು 100ರ ಗಡಿ ದಾಟಿಸಿದರು. ಆದರೆ ಜಡೇಜ ಜೊತೆಗಿನ ಹೊಂದಾಣಿಕೆ ಕೊರತೆಯಿಂದಾಗಿ ರಹಾನೆ ರನೌಟ್ಗೆ ಬಲಿಯಾದರು.
ಇದನ್ನೂ ಓದಿ:ಕ್ರೀಡೆ: ಸರ್ ಜಡೇಜ 50!
223 ಎಸೆತಗಳನ್ನು ಎದುರಿಸಿದ ರಹಾನೆ 12 ಬೌಂಡರಿಗಳ ನೆರವಿನಿಂದ 112 ರನ್ ಗಳಿಸಿದರು. ಈ ಮೂಲಕ ಆಸೀಸ್ ನೆಲದಲ್ಲಿ ಸ್ಮರಣೀಯ ಶತಕ ಬಾರಿಸಿದರು. ಅಲ್ಲದೆ ಆರನೇ ವಿಕೆಟ್ಗೆ ರವೀಂದ್ರ ಜಡೇಜ ಅವರೊಂದಿಗೆ 121 ರನ್ಗಳ ಜೊತೆಯಾಟದಲ್ಲಿ ಭಾಗಿಯಾದರು.
ಇನ್ನೊಂದೆಡೆ ಪರಿಣಾಮಕಾರಿ ಇನ್ನಿಂಗ್ಸ್ ಕಟ್ಟಿದ ರವೀಂದ್ರ ಜಡೇಜ ಅರ್ಧಶತಕ ಸಾಧನೆ ಮಾಡಿದರು. ಆದರೆ ಅರ್ಧಶತಕದ ಬೆನ್ನಲ್ಲೇ ಜಡೇಜ ಕೂಡಾ ವಿಕೆಟ್ ಒಪ್ಪಿಸಿ ಪೆವಿಲಿಯನ್ಗೆ ಮರಳಿದರು. 159 ಎಸೆತಗಳನ್ನು ಎದುರಿಸಿದ ಜಡೇಜ ಮೂರು ಬೌಂಡರಿಗಳಿಂದ 57 ರನ್ ಗಳಿಸಿದರು.
⚔⚔⚔#AUSvIND pic.twitter.com/lhmMdk14mX
— cricket.com.au (@cricketcomau) December 28, 2020
ಭಾರತ ತಂಡದ ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳು ಹೆಚ್ಚಿನ ಕೊಡುಗೆ ನೀಡಲಿಲ್ಲ. ಅಂತಿಮವಾಗಿ 326 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ಇನ್ನುಳಿದಂತೆ ರವಿಚಂದ್ರನ್ ಅಶ್ವಿನ್ (14), ಉಮೇಶ್ ಯಾದವ್ (9), ಜಸ್ಪ್ರೀತ್ ಬುಮ್ರಾ (0) ಹಾಗೂ ಮೊಹಮ್ಮದ್ ಸಿರಾಜ್ (0*) ನಿರಾಸೆ ಮೂಡಿಸಿದರು.
ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ ಹಾಗೂ ನಥನ್ ಲಿಯನ್ ತಲಾ ಮೂರು ಮತ್ತು ಪ್ಯಾಟ್ ಕಮಿನ್ಸ್ ಎರಡು ವಿಕೆಟ್ ಕಬಳಿಸಿದರು.
ಭಾರತವು ಕೊನೆಯ ಐದು ವಿಕೆಟ್ಗಳನ್ನು ಕೇವಲ 32 ರನ್ ಅಂತರದಲ್ಲಿ ಕಳೆದುಕೊಳ್ಳುವ ಮೂಲಕ ನಿರಾಸೆ ಅನುಭವಿಸಿತ್ತು.
ಈ ಮೊದಲು ಜಸ್ಪ್ರೀತ್ ಬೂಮ್ರಾ (56ಕ್ಕೆ 4), ರವಿಚಂದ್ರನ್ ಅಶ್ವಿನ್ (35ಕ್ಕೆ 3) ಹಾಗೂ ಡೆಬ್ಯು ವೇಗದ ಬೌಲರ್ ಮೊಹಮ್ಮದ್ ಸಿರಾಜ್ (40ಕ್ಕೆ 2) ನಿಖರ ದಾಳಿಯ ನೆರವಿನಿಂದ ಟೀಮ್ ಇಂಡಿಯಾವು, ಮೊದಲ ದಿನದಾಟದಲ್ಲಿ ಎದುರಾಳಿ ತಂಡವನ್ನು 195 ರನ್ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.