ಕೊಲಂಬೊ: ಸೂರ್ಯಕುಮಾರ್ ಯಾದವ್ (50; 34 ಎಸೆತ, 5 ಬೌಂಡರಿ, 2 ಸಿಕ್ಸರ್) ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಭುವನೇಶ್ವರ ಕುಮಾರ್ (22ಕ್ಕೆ 4) ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ ಶ್ರೀಲಂಕಾ ಎದುರಿನ ಟಿ20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ 38 ರನ್ಗಳಿಂದ ಗೆದ್ದಿತು.
ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 164 ರನ್ ಗಳಿಸಿತು. ಉತ್ತರವಾಗಿ ಶ್ರೀಲಂಕಾ ಇನ್ನೂ 9 ಎಸೆತಗಳು ಬಾಕಿ ಇರುವಂತೆಯೇ 126 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಆತಿಥೇಯ ತಂಡದ ಚರಿತ ಅಸ್ಲಂಕ (44) ಮಾತ್ರ ಹೋರಾಟದ ಮೊತ್ತ ದಾಖಲಿಸಿದರು.
ಇದಕ್ಕೂ ಮೊದಲು ಪ್ರವಾಸಿ ತಂಡದ ನಾಯಕ ಶಿಖರ್ ಧವನ್ (46; 36 ಎ, 4 ಬೌಂ, 1 ಸಿ) ಮತ್ತು ಸಂಜು ಸ್ಯಾಮ್ಸನ್ (27; 20 ಎ, 2 ಬೌಂ, 1 ಸಿ.) ಅರ್ಧಶತಕದ ಜೊತೆಯಾಟದ ಮೂಲಕ ಇನಿಂಗ್ಸ್ ಕಟ್ಟಿದರು. ಸಂಜು ಔಟಾದ ನಂತರ ಶಿಖರ್ ಜೊತೆಗೆ ಸೂರ್ಯಕುಮಾರ್ ಸೊಗಸಾದ ಇನಿಂಗ್ಸ್ ಕಟ್ಟಿದರು.