ಮಾಂಗ್ ಕಾಕ್ (ಹಾಂಗ್ಕಾಂಗ್), (ಪಿಟಿಐ): ಕನ್ನಡತಿ ಶ್ರೇಯಾಂಕ ಪಾಟೀಲ ಮತ್ತು ಮನ್ನತ್ ಕಶ್ಯಪ್ ಅವರ ಸ್ಪಿನ್ ದಾಳಿಯ ನೆರವಿನಿಂದ ಭಾರತ ತಂಡ 31 ರನ್ಗಳಿಂದ ಬಾಂಗ್ಲಾ ದೇಶ ತಂಡವನ್ನು ಸೋಲಿಸಿ ಮಹಿಳಾ ಎಮರ್ಜಿಂಗ್ ಏಷ್ಯಾ ಕಪ್ ಟಿ–20 ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.
ಬುಧವಾರ ನಡೆದ ಫೈನಲ್ನಲ್ಲಿ ಟಾಸ್ ಗೆದ್ದು ಬ್ಯಾಟ್ ಮಾಡಿದ ಭಾರತ 7 ವಿಕೆಟ್ಗೆ 127 ರನ್ಗಳ ಸಾಧಾರಣ ಮೊತ್ತ ಗಳಿಸಿತು. ಆದರೆ ಆಫ್ ಸ್ಪಿನ್ನರ್ ಶ್ರೇಯಾಂಕಾ (13ಕ್ಕೆ4) ಮತ್ತು ಎಡಗೈ ಸ್ಪಿನ್ನರ್ ಮನ್ನತ್ ಕಶ್ಯಪ್ (20ಕ್ಕೆ3) ಅವರ ಪರಿಣಾಮಕಾರಿ ದಾಳಿ ಎದುರು ಪರದಾಡಿದ ಬಾಂಗ್ಲಾದೇಶ ತಂಡ 19.2 ಓವರುಗಳಲ್ಲಿ 96 ರನ್ನಿಗೆ ಕುಸಿಯಿತು. ಆಫ್ ಬ್ರೇಕ್ ಬೌಲರ್ ಕನಿಕಾ ಅಹುಜಾ ಎರಡು ವಿಕೆಟ್ ಪಡೆದರು.
ಬಾಂಗ್ಲಾ ಪರ ಶೋಭನಾ ಮೊಸ್ತರಿ (16) ಮತ್ತು ನಹೀದಾ ಅಖ್ತರ್ (ಔಟಾಗದೇ 17) ಮಾತ್ರ ಕೊಂಚ ಪ್ರತಿರೋಧ ತೋರಿದರು.
ಇದಕ್ಕೆ ಮೊದಲು, ದಿನೇಶ್ ವೃಂದಾ (29 ಎಸೆತಗಳಲ್ಲಿ 36) ಭಾರತ ತಂಡದ ಪರ ಉಪಯುಕ್ತ ಆಟವಾಡಿದ್ದರು. ಕನಿಕಾ ಅಹುಜಾ (23 ಎಸೆತಗಳಲ್ಲಿ ಅಜಯೇ 30) ಕೊನೆಯಲ್ಲಿ ಇನಿಂಗ್ಸ್ಗೆ ವೇಗ ನೀಡಿದರು. ಬಾಂಗ್ಲಾ ಪರ ಎಡಗೈ ಸ್ಪಿನ್ನರ್ ನಹೀದಾ ಅಖ್ತರ್ (13ಕ್ಕೆ2) ಮತ್ತು ಆಫ್ ಸ್ಪಿನ್ನರ್ ಸುಲ್ತಾನಾ ಖಾತುನ್ (30ಕ್ಕೆ2) ಎದುರಾಳಿಗಳಿಗೆ ಕಡಿವಾಣ ಹಾಕಿದರು.
ಈ ಟೂರ್ನಿಯಲ್ಲಿ ಮಳೆಯೇ ಹೆಚ್ಚಿನ ‘ಆಟವಾಡಿತ್ತು’. ಎಂಟು ಪಂದ್ಯಗಳು ಮಳೆಯಿಂದಾಗಿ ನಡೆದಿರಲಿಲ್ಲ. ಇದರಲ್ಲಿ ಭಾರತ– ಶ್ರೀಲಂಕಾ ನಡುವಣ ಸೆಮಿಫೈನಲ್ ಕೂಡ ಒಳಗೊಂಡಿತ್ತು. ಆ ಪಂದ್ಯದಲ್ಲಿ ಒಂದೂ ಎಸೆತ ಸಾಧ್ಯವಾಗಿರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.