ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್ ಟೆಸ್ಟ್ ಸರಣಿಯ ಉಳಿದ ಪಂದ್ಯಗಳಿಗೂ ಇಲ್ಲ ಕೊಹ್ಲಿ; ತಂಡ ಪ್ರಕಟಿಸಿದ BCCI

Published 10 ಫೆಬ್ರುವರಿ 2024, 9:22 IST
Last Updated 10 ಫೆಬ್ರುವರಿ 2024, 9:22 IST
ಅಕ್ಷರ ಗಾತ್ರ

ನವದೆಹಲಿ: ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಯ ಕೊನೆಯ ಮೂರು ಪಂದ್ಯಗಳಿಗೆ 17 ಸದಸ್ಯರ ತಂಡವನ್ನು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ಪ್ರಕಟಿಸಿದೆ. ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಅವರು ಲಭ್ಯವಿರುವುದಿಲ್ಲ ಎಂದು ತಿಳಿಸಿದೆ.

ಐದು ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳಿಗೂ ವೈಯಕ್ತಿಕ ಕಾರಣದಿಂದಾಗಿ ಕೊಹ್ಲಿ ಅಲಭ್ಯರಾಗಿದ್ದರು. ಈ ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದೊಂದು ಜಯ ಗಳಿಸಿ ಸಮಬಲ ಸಾಧಿಸಿವೆ. ಮುಂದಿನ ಪಂದ್ಯವು ರಾಜ್‌ಕೋಟ್‌ನಲ್ಲಿ ಗುರುವಾರ ಆರಂಭವಾಗಲಿದೆ.

'ಸರಣಿಯ ಉಳಿದ ಪಂದ್ಯಗಳ ಆಯ್ಕೆಗೂ ಕೊಹ್ಲಿ ಅವರ ಅಲಭ್ಯತೆಯು ವೈಯಕ್ತಿಕ ಕಾರಣದಿಂದಾಗಿ ಮುಂದುವರಿದಿದೆ' ಎಂದು ಬಿಸಿಸಿಐ ಹೇಳಿಕೆ ಬಿಡುಗಡೆ ಮಾಡಿದೆ. ಕೊಹ್ಲಿ ನಿರ್ಧಾರವನ್ನು ಸಂಪೂರ್ಣ ಗೌರವಿಸುವುದಾಗಿ ಮತ್ತು ಬೆಂಬಲಿಸುವುದಾಗಿ ಹೇಳಿದೆ.

ಕೊಹ್ಲಿ ಆರಂಭಿಕ ಪಂದ್ಯಗಳಿಂದ ಹೊರಗುಳಿದಾಗಲೂ ಬಿಸಿಸಿಐ ಇದೇರೀತಿಯ ವಿವರಣೆ ನೀಡಿತ್ತು. ಅವರ ಬದಲು ರಜತ್‌ ಪಾಟೀದಾರ್‌ ತಂಡ ಸೇರಿಕೊಂಡಿದ್ದಾರೆ.

ಈವರೆಗೆ 113 ಪಂದ್ಯಗಳ 191 ಇನಿಂಗ್ಸ್‌ಗಳಲ್ಲಿ ಕಣಕ್ಕಿಳಿದಿರುವ 35 ವರ್ಷದ ಕೊಹ್ಲಿ 49.16ರ ಸರಾಸರಿಯಲ್ಲಿ 8,848 ರನ್‌ ಗಳಿಸಿದ್ದಾರೆ. ಇದರಲ್ಲಿ 29 ಶತಕಗಳು ಸೇರಿವೆ.

ಗಾಯಗೊಂಡಿದ್ದ ಆಲ್‌ರೌಂಡರ್ ರವೀಂದ್ರ ಜಡೇಜ ಮತ್ತು ಬ್ಯಾಟರ್ ಕೆ.ಎಲ್. ರಾಹುಲ್ ಅವರು ಮತ್ತೆ ತಂಡಕ್ಕೆ ಮರಳಿದ್ದಾರೆ. ಆದರೆ ಬಿಸಿಸಿಐ ವೈದ್ಯಕೀಯ ತಂಡವು ಅವರಿಬ್ಬರೂ ಆಟಗಾರರ ಫಿಟ್‌ನೆಸ್ ಕುರಿತು ವರದಿ ನೀಡಬೇಕಿದೆ. ಅದನ್ನು ಆಧರಿಸಿ ಅವರಿಗೆ ಅಂತಿಮ ಹನ್ನೊಂದರಲ್ಲಿ ಆಡುವ ಅವಕಾಶ ನೀಡಲಾಗುವುದು.

ಜಡೇಜ ಬಂದಿದ್ದರಿಂದ ಎಡಗೈ ಸ್ಪಿನ್ನರ್ ಅವರು ಸೌರಭ್ ಕುಮಾರ್ ಅವರು ತಮ್ಮ ರಾಜ್ಯ ತಂಡಕ್ಕೆ ಮರಳಿದ್ದಾರೆ. ಮೊಹಮ್ಮದ್ ಸಿರಾಜ್ ಕೂಡ ಮರಳಿದ್ದು, ಆವೇಶ್ ಖಾನ್ ಕೂಡ ತವರಿಗೆ ಹೋಗಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ಆಡಿದ್ದ ಶ್ರೇಯಸ್‌ ಅಯ್ಯರ್‌, ಗಾಯಾಳಾಗಿ ತಂಡದಿಂದ ಹೊರಗುಳಿದಿದ್ದಾರೆ.

ಆಕಾಶ್ ದೀಪ್‌ಗೆ ಸ್ಥಾನ: ಬಂಗಾಳದ ಮಧ್ಯಮವೇಗಿ ಆಕಾಶ್ ದೀಪ್ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. 27 ವರ್ಷದ ಬಲಗೈ ಬೌಲರ್ ಅವರಿಗೆ ಭಾರತ ತಂಡದಿಂದ ಲಭಿಸಿದ ಮೊದಲ ಕರೆಯಾಗಿದೆ.

ಟೂರ್ನಿಯ ಕೊನೇ ಮೂರು ಪಂದ್ಯಗಳು ಕ್ರಮವಾಗಿ ರಾಜ್‌ಕೋಟ್‌ (ಫೆ.15), ರಾಂಚಿ (ಫೆ.23) ಹಾಗೂ ಧರ್ಮಶಾಲಾದಲ್ಲಿ (ಮಾ.7) ನಡೆಯಲಿವೆ.

ಕೊನೇ ಮೂರು ಪಂದ್ಯಗಳಿಗೆ ಭಾರತ ತಂಡ ಪ್ರಕಟ
ರೋಹಿತ್‌ ಶರ್ಮಾ (ನಾಯಕ), ಜಸ್‌ಪ್ರಿತ್‌ ಬೂಮ್ರಾ, ಯಶಸ್ವಿ ಜೈಸ್ವಾಲ್, ಶುಭಮನ್‌ ಗಿಲ್‌, ಕೆ.ಎಲ್‌.ರಾಹುಲ್‌, ರಜತ್ ಪಾಟೀದಾರ್‌, ಸರ್ಫರಾಜ್‌ ಖಾನ್‌, ಧೃವ್‌ ಜುರೇಲ್‌ (ವಿಕೆಟ್‌ ಕೀಪರ್‌), ಕೆ.ಎಸ್‌.ಭರತ್‌ (ವಿಕೆಟ್‌ ಕೀಪರ್‌), ರವಿಚಂದ್ರನ್‌ ಅಶ್ವಿನ್‌, ರವೀಂದ್ರ ಜಡೇಜ, ಅಕ್ಷರ್ ಪಟೇಲ್‌, ವಾಷಿಂಗ್ಟನ್‌ ಸುಂದರ್‌, ಕುಲದೀಪ್‌ ಯಾದವ್‌, ಮೊಹಮ್ಮದ್ ಸಿರಾಜ್‌, ಮುಕೇಶ್‌ ಕುಮಾರ್‌, ಆಕಾಶ್ ದೀಪ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT