ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ನೇ ಟೆಸ್ಟ್‌ನಲ್ಲೂ ರಾಹುಲ್‌ ವಿಫಲ: ಆಯ್ಕೆ ಸಮಿತಿ ವಿರುದ್ಧ ವೆಂಕಟೇಶ್ ಕಿಡಿ

ರಾಹುಲ್ ಆಯ್ಕೆ ನ್ಯಾಯದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡುತ್ತಿದೆ: ವೆಂಕಿ
Last Updated 18 ಫೆಬ್ರುವರಿ 2023, 16:33 IST
ಅಕ್ಷರ ಗಾತ್ರ

ಬೆಂಗಳೂರು: ಸತತ ವೈಫಲ್ಯದ ಹೊರತಾಗಿಯೂ ಕೆ.ಎಲ್‌ ರಾಹುಲ್‌ ಅವರಿಗೆ ಟೆಸ್ಟ್‌ ತಂಡಲ್ಲಿ ಸ್ಥಾನ ನೀಡುತ್ತಿರುವುದರ ಬಗ್ಗೆ ಭಾರತ ಮಾಜಿ ಕ್ರಿಕೆಟಿಗ ವೆಂಕಟೇಶ್‌ ಪ್ರಸಾದ್ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ರಾಹುಲ್‌ ಅವರಿಗೆ ಪದೇ ಪದೇ ಅವಕಾಶ ನೀಡುತ್ತಿರುವುದು ನ್ಯಾಯದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡುತ್ತಿದೆ‘ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಸದ್ಯ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್‌–ಗವಾಸ್ಕರ್‌ ಟ್ರೋಫಿಯ ಎರಡನೇ ಟೆಸ್ಟ್‌ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲೂ ಕೆ.ಎಲ್‌ ರಾಹುಲ್‌ ಕಳಪೆ ಪ್ರದರ್ಶನ ನೀಡಿದ್ದು, ಇದರ ಬೆನ್ನಲ್ಲೇ ವೆಂಕಿ ತೀಕ್ಷ್ಣ ಮಾತುಗಳ ಮೂಲಕ ಟೀಕೆ ಮಾಡಿದ್ದಾರೆ.

‘ಅವರ ರನ್‌ ಬರ ಮುಂದುವರಿದಿದೆ. ಇಷ್ಟು ಕಡಿಮೆ ಸರಾಸರಿಯೊಂದಿಗೆ ಆಡಿದ ಯಾವುದೇ ಭಾರತೀಯ ಬ್ಯಾಟರ್‌ನನ್ನು ನಾನು ಕಳೆದ 20 ವರ್ಷಗಳಲ್ಲಿ ಕಂಡಿಲ್ಲ. ತಂಡಲ್ಲಿ ಇವರ ಸೇರ್ಪಡೆಯಿಂದಾಗಿ ಆಡುವ 11ರ ಬಳಗದಲ್ಲಿ ಅವಕಾಶ ಪಡೆಯಲು ಪ್ರಯತ್ನಿಸುತ್ತಿರುವ ಪ್ರತಿಭಾನಿತ್ವ ಆಟಗಾರರಿಗೆ ಅನ್ಯಾಯವಾಗುತ್ತಿದೆ‘ ಎಂದು ಅವರು ಖಾರವಾಗಿ ನುಡಿದಿದ್ದಾರೆ.

‘ಶಿಖರ್‌ ಧವನ್‌ ಅವರು 40+ ಹಾಗೂ ಮಾಯಾಂಕ್‌ ಮಯಂಕ್ ಅಗರವಾಲ್ ಅವರು 2 ದ್ವಿಶತಕದೊಂದಿಗೆ 41+ ಟೆಸ್ಟ್‌ ಸರಾಸರಿ ಹೊಂದಿದ್ದಾರೆ. ಶುಭ್‌ಮನ್‌ ಗಿಲ್‌ ಸರತಿಯಲ್ಲಿದ್ದಾರೆ. ದೇಶಿಯ ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿ ಇದ್ದರೂ ಸರ್ಫರಾಜ್‌ ಖಾನ್ ಅವರ ಕಾಯುವಿಕೆ ಮುಗಿದಿಲ್ಲ. ರಾಹುಲ್‌ ಅವರಿಗೆ ಪದೇ ಪದೇ ಅವಕಾಶ ನೀಡುತ್ತಿರುವುದು ನ್ಯಾಯದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡುತ್ತಿದೆ‘ ಎಂದು ಹೇಳಿದ್ದಾರೆ.

‘ನನ್ನ ಪ್ರಕಾರ ಭಾರತದ ಟಾಪ್‌–10 ಓಪನರ್‌ಗಳ ಪೈಕಿ ಅವರು ಇಲ್ಲ. ಆದರೂ ಅವರಿಗೆ ಬೇಕಾದಷ್ಟು ಅವಕಾಶ ನೀಡಲಾಗುತ್ತಿದೆ. ಉತ್ತಮ ಪ್ರದರ್ಶನ ನೀಡಿದರೂ, ಕುಲದೀಪ್‌ ಅವರನ್ನು ಮುಂದಿನ ಟೆಸ್ಟ್‌ನಿಂದ ಡ್ರಾಪ್‌ ಮಾಡಲಾಗಿತ್ತು‘ ಎಂದು ಅವರು ಹೇಳಿದ್ದಾರೆ.

ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ರಾಹುಲ್ ಅವರು ಕೇವಲ 17 ರನ್‌ ಗಳಿಸಿ ನಿರ್ಗಮಿಸಿದ್ದರು.

ಮೊದಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ನಲ್ಲಿ ಕೇವಲ 20 ರನ್‌ ಗಳಿಸಿದ್ದರು. ರಾಹುಲ್‌ ಅವರಿಗೆ ಪಕ್ಷಪಾತ ಧೋರಣೆಯಿಂದಾಗಿ ಅವಕಾಶ ಸಿಗುತ್ತಿದೆ ಎಂದು ವೆಂಕಟೇಶ್‌ ಅಸಮಾಧಾನ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT