ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ‘ಎ’ ತಂಡಕ್ಕೆ ಜಯದ ಅವಕಾಶ

ಕ್ರಿಕೆಟ್‌: ಮಳೆಯಾಟದ ನಡುವೆ ಮಿಂಚಿದ ಶಹಬಾಜ್ ನದೀಂ
Last Updated 11 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ತಿರುವನಂತಪುರ: ದಕ್ಸಿಣ ಆಫ್ರಿಕಾ ಎ ಮತ್ತು ಭಾರತ ಎ ತಂಡಗಳ ನಡುವೆ ಇಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬುಧವಾರ ದಿನದಾಟದ ಬಹುತೇಕ ಭಾಗವು ಮಳೆಗೆ ಆಹುತಿಯಾಯಿತು. ಆದರೂ ಭಾರತ ‘ಎ’ ತಂಡಕ್ಕೆ ಗೆಲುವಿನ ಆಶಾಕಿರಣವೊಂದನ್ನು ಉಳಿಸಿಹೋಯಿತು.

ಎರಡನೇ ಇನಿಂಗ್ಸ್‌ ಆಡುತ್ತಿರುವ ಪ್ರವಾಸಿ ತಂಡವು ಮೂರನೇ ದಿನದಾಟದ ಅಂತ್ಯಕ್ಕೆ 55 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 179 ರನ್‌ ಗಳಿಸಿದೆ. 40 ರನ್‌ಗಳ ಅಲ್ಪ ಮುನ್ನಡೆ ಸಾಧಿಸಿದೆ. ದಕ್ಷಿಣ ಆಫ್ರಿಕಾ ಎ ತಂಡವು ಮೊದಲ ಇನಿಂಗ್ಸ್‌ನಲ್ಲಿ 164 ರನ್ ಗಳಿಸಿತ್ತು. ಅದಕ್ಕುತ್ತರವಾಗಿ ಭಾರತ ತಂಡವು 303 ರನ್‌ ಗಳಿಸಿ 139 ರನ್‌ಗಳ ಮುನ್ನಡೆ ಸಾಧಿಸಿತ್ತು. ಎರಡನೇ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ ಎ ತಂಡವು 5 ವಿಕೆಟ್‌ಗಳಿಗೆ 125 ರನ್ ಗಳಿಸಿತು.

ಮಳೆಯಿಂದ ಅಡೆತಡೆಯಾದ ದಿನದಲ್ಲಿಯೂ ಆತಿಥೇಯ ಬೌಲರ್‌ಗಳು ಮಿಂಚಿದರು. ಸ್ಪಿನ್ನರ್ ಶಹಬಾಜ್ ನದೀಪ್ (17ಕ್ಕೆ3) ಮತ್ತು ಜಲಜ್ ಸಕ್ಸೆನಾ (22ಕ್ಕೆ2) ಪ್ರವಾಸಿ ತಂಡಕ್ಕೆ ಬಲವಾದ ಪೆಟ್ಟು ಕೊಟ್ಟರು.ಮಲ್ದರ್ ಅವರೊಬ್ಬರೇ ಹೆಚ್ಚು ರನ್ ಗಳಿಸಿದರು. 46 ರನ್ ಗಳಿಸಿದ ಅವರು ತಂಡಕ್ಕೆ ಅಲ್ಪ ಮುನ್ನಡೆ ಸಿಗಲು ಕಾರಣರಾದರು. ಡೇನ್ ಪೀಡ್ತ್, ಮಾರ್ಕೊ ಜೆನ್ಸೆನ್‌ ಮತ್ತು ಹೆನ್ರಿಕ್ ಕ್ಲಾಸೆನ್ ಅವರು ಒಂದಂಕಿಗೆ ವಿಕೆಟ್ ಕಳೆದುಕೊಂಡರು.

ಅದರಿಂದಾಗಿ ಹೆಚ್ಚು ರನ್‌ ಗಳಿಸಲು ತಂಡಕ್ಕೆ ಸಾಧ್ಯವಾಗಲಿಲ್ಲ. ಅದರ ಖಾತೆಯಲ್ಲಿ ಇನ್ನೊಂದೇ ವಿಕೆಟ್ ಇದೆ. ಅದರಿಂದಾಗಿ ಗುರುವಾರದ ಬೆಳಿಗ್ಗೆಯ ಆಟದಲ್ಲಿ ಬೇಗನೆ ವಿಕೆಟ್ ಕಬಳಿಸಿ ಅಲ್ಪಮೊತ್ತದ ಗುರಿಯನ್ನು ಸಾಧಿಸುವ ಯೋಚನೆಯಲ್ಲಿ ಆತಿಥೇಯ ತಂಡವಿದೆ. ಮಳೆ ಅವಕಾಶ ಕೊಡಬೇಕಷ್ಟೇ!

ಸಂಕ್ಷಿಪ್ತ ಸ್ಕೋರು:ಮೊದಲ ಇನಿಂಗ್ಸ್‌: ದಕ್ಷಿಣ ಆಫ್ರಿಕಾ 164, ಭಾರತ:303, ಎರಡನೇ ಇನಿಂಗ್ಸ್: 55 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 179 (ಲಾನ್ ಮಲ್ದರ್ 46, ಶಹಬಾಜ್ ನದೀಂ 17ಕ್ಕೆ3, ಜಲಜ್ ಸಕ್ಸೆನಾ 22ಕ್ಕೆ2, ಕೃಷ್ಣಪ್ಪ ಗೌತಮ್ 52ಕ್ಕೆ1, ಶಾರ್ದೂಲ್ ಠಾಕೂರ್ 28ಕ್ಕೆ1, ಮೊಹಮ್ಮದ್ ಸಿರಾಜ್ 36ಕ್ಕೆ1) ಮೂರನೇ ದಿನದಾಟದ ಕೊನೆಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT