ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2022ನೇ ಸಾಲಿ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇ-ಆಫ್ ಹಂತಕ್ಕೆ ಪ್ರವೇಶಿಸಲಿದೆ ಎಂದು ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಭವಿಷ್ಯ ನುಡಿದಿದ್ದಾರೆ.
ಪಂದ್ಯದಿಂದ ಪಂದ್ಯಕ್ಕೆ ಆರ್ಸಿಬಿ ಉತ್ತಮ ಪ್ರದರ್ಶನ ನೀಡುತ್ತಿದೆ ಎಂದು ಶಾಸ್ತ್ರಿ ಹೇಳಿದರು.
ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಆರ್ಸಿಬಿ, ಬಳಿಕದ ಮೂರು ಪಂದ್ಯಗಳಲ್ಲಿ ಗೆಲುವು ದಾಖಲಿಸಿತ್ತು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸೋಲಿನ ಆಘಾತ ಎದುರಿಸಿತ್ತು.
'ಈ ಋತುವಿನಲ್ಲಿ ಹೊಸ ಚಾಂಪಿಯನ್ ತಂಡವನ್ನು ನಾನು ನಿರೀಕ್ಷಿಸುತ್ತೇನೆ. ರಾಯಲ್ ಚಾಲೆಂಜರ್ಸ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ಖಂಡಿತವಾಗಿಯೂ ಪ್ಲೇ-ಆಫ್ಗೆ ತಲುಪಲಿದೆ. ಟೂರ್ನಿ ಪ್ರಗತಿಯಲ್ಲಿರುವಂತೆಯೇ ಆರ್ಸಿಬಿ ಉತ್ತಮ ಲಯ ಕಂಡುಕೊಂಡಿದೆ' ಎಂದು ಹೇಳಿದರು.
ಆರ್ಸಿಬಿ ಪಾಲಿಗೆ ನಾಯಕ ಫಫ್ ಡುಪ್ಲೆಸಿ, ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಫಾರ್ಮ್ ನಿರ್ಣಾಯಕವೆನಿಸಲಿದೆ ಎಂದು ಶಾಸ್ತ್ರಿ ಹೇಳಿದರು.