ತಿರುವನಂತಪುರ: ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಇಂದು ಕೇರಳ ರಾಜಧಾನಿಯಲ್ಲಿ ನಡೆಯಲಿದೆ.
ತಿರುವನಂತಪುರಕ್ಕೆ ಬಂದ ಟೀಮ್ ಇಂಡಿಯಾ ಆಟಗಾರರಿಗೆ ಭರ್ಜರಿ ಸ್ವಾಗತ ದೊರೆತಿದೆ. ಸ್ಥಳೀಯರು ಆಟಗಾರರನ್ನು ಸ್ವಾಗತಿಸಿರುವ ವಿಡಿಯೊವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟ್ವೀಟ್ ಮಾಡಿದೆ.
ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ನಗರದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ಗ್ರೀನ್ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದ ಹೊರಭಾಗದಲ್ಲಿ ಕೊಹ್ಲಿ ಅವರ ಬೃಹದಾಕಾರದ ಕಟೌಟ್ ಹಾಕಲಾಗಿದೆ. ಈ ಕುರಿತ ಚಿತ್ರವನ್ನು ಕ್ರಿಕೆಟ್ ಅಭಿಮಾನಿಗಳು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ತಂಡವು ಭಾನುವಾರವೇ ತಿರುವನಂತಪುರಕ್ಕೆ ಬಂದಿತ್ತು. ರೋಹಿತ್ ಬಳಗ ಸೋಮವಾರ ನಗರಕ್ಕೆ ಬಂದಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಉಳಿದ ಎರಡು ಟಿ20 ಪಂದ್ಯಗಳು ಗುವಾಹಟಿಯಲ್ಲಿ (ಅಕ್ಟೋಬರ್ 2) ಮತ್ತು ಇಂದೋರ್ನಲ್ಲಿ (ಅಕ್ಟೋಬರ್ 4) ನಡೆಯಲಿವೆ. ನಂತರ ಉಭಯ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸೆಣಸಲಿವೆ.
ಇತ್ತೀಚೆಗೆ ಕೊನೆಗೊಂಡ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನು ಭಾರತ ತಂಡವು 2–1 ಅಂತರದಿಂದ ಗೆದ್ದುಕೊಂಡಿದೆ. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧವೂ ಉತ್ತಮ ಪ್ರದರ್ಶನ ನೀಡಿ ಟಿ20 ವಿಶ್ವಕಪ್ಗೆ ಸಿದ್ಧವಾಗುವ ತವಕದಲ್ಲಿದೆ.