ನವದೆಹಲಿ: ಅತಿಥೇಯ ವೆಸ್ಟ್ಇಂಡೀಸ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಬಲಗೈ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಹೊರಗುಳಿಯಲಿದ್ದಾರೆ.
ಈ ಕುರಿತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಹಿತಿ ನೀಡಿದೆ.
ಹಿಮ್ಮಡಿ ನೋವಿನಿಂದ ಬಳಲುತ್ತಿರುವ ಸಿರಾಜ್ಗೆ ಮುಂಜಾಗ್ರತಾ ಕ್ರಮವಾಗಿ ವಿಶ್ರಾಂತಿ ಸೂಚಿಸಲಾಗಿದೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.
ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಐದು ವಿಕೆಟ್ ಗಳಿಸಿದ್ದ ಸಿರಾಜ್ ಈಗ ತವರಿಗೆ ಪಯಣಿಸಲಿದ್ದಾರೆ.
ಸಿರಾಜ್ ಬದಲಿ ಆಟಗಾರನನ್ನು ಪ್ರಕಟಿಸಿಲ್ಲ. ಸಿರಾಜ್ ಜೊತೆಗೆ ಟೆಸ್ಟ್ ತಂಡದಲ್ಲಿದ್ದ ರವಿಚಂದ್ರನ್ ಅಶ್ವಿನ್, ಅಜಿಂಕ್ಯ ರಹಾನೆ, ಕೆ.ಎಸ್. ಭರತ್ ಮತ್ತು ನವದೀಪ್ ಸೈನಿ ಕೂಡ ತವರಿಗೆ ಮರಳಲಿದ್ದಾರೆ.
ಸಿರಾಜ್ ಅನುಪಸ್ಥಿತಿಯಲ್ಲಿ ಭಾರತ ವೇಗದ ಬೌಲಿಂಗ್ ಪಡೆಗೆ ಅನನುಭವ ಕಾಡಲಿದೆ. ಜೈದೇವ್ ಉನಾದ್ಕಟ್, ಉಮ್ರಾನ್ ಮಲಿಕ್, ಶಾರ್ದೂಲ್ ಠಾಕೂರ್ ಹಾಗೂ ಮುಕೇಶ್ ಕುಮಾರ್ ತಂಡದಲ್ಲಿದ್ದಾರೆ.
ಭಾರತ ಮತ್ತು ವಿಂಡೀಸ್ ನಡುವಣ ಮೊದಲ ಏಕದಿನ ಪಂದ್ಯ ಇಂದು ರಾತ್ರಿ 7ಕ್ಕೆ ಬಾರ್ಬಡೋಸ್ನಲ್ಲಿ ಆರಂಭವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.