ಮುಂಬೈ: ಈ ಬಾರಿಯ ರಣಜಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮುಂಬೈ ಹಾಗೂ ವಿದರ್ಭ ತಂಡಗಳು ಮುಖಾಮುಖಿಯಾಗಿವೆ.
ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದಿರುವ ವಿದರ್ಭ ತಂಡದ ನಾಯಕ ಅಕ್ಷಯ್ ವಾಡ್ಕರ್, ಎದುರಾಳಿಯನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ್ದಾರೆ. 16 ಓವರ್ಗಳ ಆಟ ಮುಕ್ತಾಯವಾಗಿದೆ.
ಅಜಿಂಕ್ಯ ರಹಾನೆ ನಾಯಕತ್ವದ ಮುಂಬೈ ತಂಡ ವಿಕೆಟ್ ನಷ್ಟವಿಲ್ಲದೆ 69 ರನ್ ಗಳಿಸಿದೆ. ಪೃಥ್ವಿ ಶಾ (38 ರನ್) ಹಾಗೂ ಭೂಪೆನ್ ಲಾಲ್ವಾನಿ (30 ರನ್) ಕ್ರೀಸ್ನಲ್ಲಿದ್ದಾರೆ.
ರಹಾನೆ ಬಳಗ 42ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟು ಆಡುತ್ತಿದ್ದರೆ, ಅಕ್ಷಯ್ ಪಡೆ ಮೂರನೇ ಟ್ರೋಫಿಗಾಗಿ ಸೆಣಸುತ್ತಿದೆ. ಹೀಗಾಗಿ ಪಂದ್ಯ ಕುತೂಹಲಕ್ಕೆ ಎಡೆಮಾಡಿದೆ.
ಮುಂಬೈ ಪರ ಪೃಥ್ವಿ ಶಾ (421 ರನ್) ವಿಕೆಟ್ ಕೀಪರ್ ಬ್ಯಾಟರ್ ಹಾರ್ದಿಕ್ ತಮೋರೆ (252 ರನ್), ವೇಗದ ಬೌಲರ್ ತನುಷ್ ಕೋಟ್ಯಾನ್ (481), ಶಮ್ಸ್ ಮುಲಾನಿ (290) ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. 19 ವರ್ಷದೊಳಗಿನವರ ತಂಡದಲ್ಲಿ ಆಡಿದ್ದ ಮುಶೀರ್ ಖಾನ್ (291 ರನ್) ಅವರೂ ಬ್ಯಾಟಿಂಗ್ನಲ್ಲಿ ಉಪಯುಕ್ತ ಕೊಡುಗೆ ನೀಡಬಲ್ಲರು.
ಸ್ಥಿರ ಪ್ರದರ್ಶನ ತೋರುತ್ತಿರುವ ಎರಡು ಬಾರಿಯ ಚಾಂಪಿಯನ್ ವಿದರ್ಭ ಬ್ಯಾಟಿಂಗ್ಗೆ ಕನ್ನಡಿಗ ಕರುಣ್ ನಾಯರ್ (616 ರನ್), ಧ್ರುವ್ ಶೋರೆ (549 ರನ್), ಅಥರ್ವ ತೈಡೆ (529), ಯಶ್ ರಾಥೋಡ್ (456) ಟೂರ್ನಿಯುದ್ದಕ್ಕೂ ಬಲ ತುಂಬಿದ್ದಾರೆ. ಈ ತಂಡದ, ಆದಿತ್ಯ ಸರ್ವಟೆ (40 ವಿಕೆಟ್) ಮತ್ತು ಆದಿತ್ಯ ಠಾಕರೆ (33) ಅವರು ಯಶಸ್ವಿ ಬೌಲರ್ಗಳಾಗಿದ್ದಾರೆ.
ಸೆಮಿಫೈನಲ್ ಸೆಣಸಾಟದಲ್ಲಿ ಮುಂಬೈ ತಂಡ ತಮಿಳುನಾಡು ವಿರುದ್ಧ ಮತ್ತು ವಿದರ್ಭ ತಂಡ ಮಧ್ಯಪ್ರದೇಶ ಎದುರು ಗೆಲುವು ಸಾಧಿಸಿದ್ದವು.