ಭಾರತ 2ನೇ ಸಲ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದಾಗ, ಫೈನಲ್ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಕ್ಕಿದ್ದು ಯಾರಿಗೆ ಎಂಬುದುಬಿಸಿಸಿಐಗೆ ಗೊತ್ತಿಲ್ಲವೇ? ಬಿಸಿಸಿಐ ಮಾಡಿರುವ ಟ್ವೀಟ್ ನೋಡಿದರೆ ಇಂತಹದೊಂದು ಪ್ರಶ್ನೆ ಮೂಡದೇ ಇರದು.
ಬರೋಬ್ಬರಿ 9 ವರ್ಷಗಳ ಹಿಂದೆ ಇದೇ ದಿನ ಭಾರತ ತಂಡವು ಏಕದಿನ ಕ್ರಿಕೆಟ್ನಲ್ಲಿ ಎರಡನೇ ಬಾರಿಗೆ ವಿಶ್ವಕಪ್ ಗೆದ್ದು ಸಂಭ್ರಮಿಸಿತ್ತು. 2011ರ ಏಪ್ರಿಲ್ 2ರಂದು ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡದ ವಿರುದ್ಧ 6 ವಿಕೆಟ್ ಅಂತರದ ಗೆಲುವು ಸಾಧಿಸಿದ ಭಾರತ ಚಾಂಪಿಯನ್ ಎನಿಸಿತ್ತು.
ಆ ದಿನವನ್ನು ನೆನಪಿಸಿಕೊಳ್ಳುವ ಸಲುವಾಗಿ ಟ್ವೀಟ್ ಮಾಡಿರುವ ಬಿಸಿಸಿಐ ಎಡವಟ್ಟು ಮಾಡಿದೆ.
‘2011ರ ಈ ದಿನ
122 ಎಸೆತಗಳಲ್ಲಿ 97 ರನ್ ಗಳಿಸಿ ಅಮೋಘ ಆಟವಾಡುವ ಮೂಲಕ ಗೌತಮ್ ಗಂಭೀರ್ ಪಂದ್ಯ ಶ್ರೇಷ್ಠ ಎನಿಸಿದ್ದರು. ಅದರ ನೆರವಿನಿಂದಭಾರತ 28 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲಲು ಸಾಧ್ಯವಾಯಿತು’ ಎಂದು ಬರೆದುಕೊಂಡಿದೆ.
ಫೈನಲ್ನಲ್ಲಿ ಗಂಭೀರ್ ಅದ್ಭುತ ಆಟವಾಡಿದ್ದರಾದರೂ, ಪಂದ್ಯ ಶ್ರೇಷ್ಠ ಪ್ರಶಸ್ತಿ ಆಗಿನ ನಾಯಕ ಎಂ.ಎಸ್.ಧೋನಿಗೆ ಲಭಿಸಿತ್ತು. ಹೀಗಾಗಿ ನೆಟ್ಟಿಗರು ಬಿಸಿಸಿಐ ಅನ್ನು ಟ್ರೋಲ್ ಮಾಡಿದ್ದಾರೆ. ಪಂದ್ಯ ಶ್ರೇಷ್ಠ ಗಂಭೀರ್ ಅಲ್ಲ ಧೋನಿ ಎಂದು ಕಾಮೆಂಟ್ಮಾಡಿದ್ದಾರೆ.
ಅಂದಹಾಗೆ ಕಪಿಲ್ ದೇವ್ ನೇತೃತ್ವದ ತಂಡ 1983ರಲ್ಲಿ ಮೊದಲ ಸಲ ವಿಶ್ವಕಪ್ ಗೆದ್ದಿತ್ತು. ಅದಾದ ನಂತರ 28 ವರ್ಷಗಳು ಉರುಳಿದರೂ ಮತ್ತೊಮ್ಮೆ ಚಾಂಪಿಯನ್ ಎನಿಸಲು ಟೀಂ ಇಂಡಿಯಾಗೆ ಸಾಧ್ಯವಾಗಿರಲಿಲ್ಲ.
ಹೀಗಿತ್ತು ಫೈನಲ್ ಪಂದ್ಯ
ಫೈನಲ್ ಪಂದ್ಯ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ 275 ರನ್ಗಳ ಸವಾಲಿನ ಗುರಿ ನೀಡಿತ್ತು. ಈಗುರಿ ಎದುರುಬ್ಯಾಟಿಂಗ್ ಆರಂಭಿಸಿದ್ದ ಭಾರತಕ್ಕೆ ಆರಂಭಿಕ ಆಘಾತ ಕಾದಿತ್ತು.ಖಾತೆ ತೆರೆಯುವ ಮೊದಲೇ ಆರಂಭಿಕ ವೀರೇಂದ್ರ ಸೆಹ್ವಾಗ್ ಪೆವಿಲಿಯನ್ ಸೇರಿಕೊಂಡಿದ್ದರು. ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್(18) ಅವರೂ ಹೆಚ್ಚು ಹೊತ್ತು ನಿಂತಿರಲಿಲ್ಲ.
ತಂಡದ ಮೊತ್ತ 31 ಆಗುವಷ್ಟರಲ್ಲೇ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಆಗ ಆಸರೆಯಾಗಿದ್ದುಗೌತಮ್ ಗಂಭೀರ್.ತಾಳ್ಮೆಯಿಂದ ಇನಿಂಗ್ಸ್ ಕಟ್ಟಿದ್ದಅವರು ಎರಡು ಪ್ರಮುಖ ಜೊತೆಯಾಟದಲ್ಲಿ ಭಾಗಿಯಾದರು. ಈಗಿನ ನಾಯಕ ವಿರಾಟ್ ಕೊಹ್ಲಿ(35) ಜೊತೆ ಸೇರಿ ಮೂರನೇ ವಿಕೆಟ್ಗೆ 83 ರನ್ ಹಾಗೂ ಧೋನಿ ಜೊತೆ 4ನೇ ವಿಕೆಟ್ಗೆ 109ರನ್ ಕೂಡಿಸಿದ್ದರು.
122 ಎಸೆತಗಳಲ್ಲಿ 9 ಬೌಂಡರಿ ಸಹಿತ 97 ರನ್ ಗಳಿಸಿ ತಿಸಾರ ಪೆರೆರಾ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರಾದರೂ, ಅಷ್ಟರಲ್ಲಿ ತಂಡ ಗೆಲುವಿನ ಸನಿಹಕ್ಕೆ ಬಂದು ನಿಂತಿತ್ತು. ಬಳಿಕ ಬಿರುಸಿನ ಬ್ಯಾಟಿಂಗ್ ನಡೆಸಿದ್ದ ಧೋನಿ (92), ಯುವರಾಜ್ ಸಿಂಗ್(21) ಜೊತೆ ಸೇರಿ 48.2 ಎರಡನೇ ಓವರ್ನಲ್ಲಿ ಜಯದ ಲೆಕ್ಕ ಚುಕ್ತಾ ಮಾಡಿದ್ದರು.
ಭಾರತವು ಏಕದಿನ ಕ್ರಿಕೆಟ್ನಲ್ಲಿ ಎರಡನೇ ಸಲ ವಿಶ್ವಕಪ್ ಎತ್ತಿ ಹಿಡಿದು ವಿಶ್ವ ವಿಜೇತ ಎನಿಸಿಕೊಂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.