ಬೆಂಗಳೂರು: ಕರ್ನಾಟಕದ ಉದಯೋನ್ಮುಖ ಮಧ್ಯಮವೇಗಿ ವಿದ್ವತ್ ಕಾವೇರಪ್ಪ ದಾಳಿಗೆ ಪುದುಚೇರಿ ತಂಡವು ಕುಸಿಯಿತು.
ಮಂಗಳವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸಿ ಗುಂಪಿನ ಪಂದ್ಯದಲ್ಲಿ ವಿದ್ವತ್ (36ಕ್ಕೆ3) ದಾಳಿಯಿಂದಾಗಿ ಪುದುಚೇರಿ ತಂಡವು ಮೊದಲ ಇನಿಂಗ್ಸ್ನಲ್ಲಿ 54 ಓವರ್ಗಳಲ್ಲಿ 170 ರನ್ ಗಳಿಸಿ ಆಲೌಟ್ ಆಯಿತು.
ಚಹಾ ವಿರಾಮದ ನಂತರ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡಕ್ಕೆ ಶತಕದ ಜೊತೆಯಾಟವಾಡಿದ ಆರ್. ಸಮರ್ಥ್ (ಬ್ಯಾಟಿಂಗ್ 59; 97ಎ) ಮತ್ತು ನಾಯಕ ಮಯಂಕ್ ಅಗರವಾಲ್ (51; 91ಎ) ಅವರು ಅಡಿಪಾಯ ಹಾಕಿದ್ದಾರೆ. ಮೊದಲ ದಿನದಾಟದ ಮುಕ್ತಾಯಕ್ಕೆ ಕರ್ನಾಟಕ ತಂಡವು 32 ಓವರ್ಗಳಲ್ಲಿ 1 ವಿಕೆಟ್ಗೆ 111 ರನ್ ಗಳಿಸಿದೆ. ಸಮರ್ಥ್ ಜೊತೆಗೆ ’ರಾತ್ರಿ ಕಾವಲುಗಾರ‘ ರೋನಿತ್ ಮೋರೆ ಕ್ರೀಸ್ನಲ್ಲಿದ್ದಾರೆ.
ವಿದ್ವತ್ ಶಿಸ್ತಿನ ದಾಳಿ;ಹೋದ ವರ್ಷದ ರಣಜಿ ಋತುವಿನಲ್ಲಿ ಪದಾರ್ಪಣೆ ಮಾಡಿದ್ದ ವಿದ್ವತ್ ಭರವಸೆ ಮೂಡಿಸಿದ್ದರು. ಈ ಬಾರಿಯೂ ಆಯ್ಕೆಗಾರರ ವಿಶ್ವಾಸ ಉಳಿಸಿಕೊಂಡಿದ್ದಾರೆ. ಸರ್ವಿಸಸ್ ಎದುರಿನ ಮೊದಲ ಪಂದ್ಯದಲ್ಲಿ ಮಿಂಚಿದ್ದ ಅವರು ಪುದುಚೇರಿ ಎದುರಿನ ಹಣಾಹಣಿಯಲ್ಲಿಯೂ ತಮ್ಮ ಭುಜಬಲ ಮೆರೆದರು.
ಇನಿಂಗ್ಸ್ನ ಐದನೇ ಓವರ್ನಲ್ಲಿ ಪುದುಚೇರಿಯ ನಯನ್ ಕಾಂಗಿಯನ್ ಖಾತೆ ತೆರೆಯುವ ಮುನ್ನವೇ ವಿದ್ವತ್ ಬೀಸಿದ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. 11ನೇ ಓವರ್ನಲ್ಲಿ ವಿದ್ವತ್ ಎಸೆತವನ್ನು ಆಡುವ ಯತ್ನದಲ್ಲಿ ಕೆ. ಅರವಿಂದ್ ಸ್ಲಿಪ್ನಲ್ಲಿದ್ದ ಮನೀಷ್ ಪಾಂಡೆಗೆ ಕ್ಯಾಚ್ ಆದರು. ಮೂರು ಓವರ್ಗಳ ನಂತರ ರೋನಿತ್ ಮೋರೆ ಎಸೆತದಲ್ಲಿ ಜಯ್ ಪಾಂಡೆ ಕೂಡ ಸ್ಲಿಪ್ ಫೀಲ್ಡರ್ ಮನೀಷ್ಗೆ ಕ್ಯಾಚ್ ಕೊಟ್ಟರು.
ಈ ಹಂತದಲ್ಲಿ ನಾಯಕ ದಾಮೋದರನ್ ರೋಹಿತ್ ಹಾಗೂ ಪಾರಸ್ ಡೋಗ್ರಾ ಜೊತೆಗೂಡಿ ಇನಿಂಗ್ಸ್ಗೆ ಬಲ ತುಂಬುವ ಪ್ರಯತ್ನ ಮಾಡಿದರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 36 ರನ್ ಸೇರಿಸಿದರು. ಈ ಪಾಲುದಾರಿಕೆಯ ಆಟವನ್ನೂ ವಿದ್ವತ್ ಮುರಿದರು. 23ನೇ ಓವರ್ನಲ್ಲಿ ವಿದ್ವತ್ ಆಫ್ಸ್ಟಂಪ್ ಎಸೆತವನ್ನು ಹೊಡೆಯುವ ಯತ್ನದಲ್ಲಿ ಡೋಗ್ರಾ, ವಿಕೆಟ್ಕೀಪರ್ ಬಿ.ಆರ್. ಶರತ್ಗೆ ಕ್ಯಾಚಿತ್ತರು.ವಿದ್ವತ್ಗೆ ಮತ್ತೊಬ್ಬ ಮಧ್ಯಮವೇಗಿ ವಿಜಯಕುಮಾರ್ ವೈಶಾಖ ಉತ್ತಮ ಬೆಂಬಲ ನೀಡಿದರು. ಅವರು ಅರುಣ್ ಕಾರ್ತಿಕ್ ಮತ್ತು ರೋಹಿತ್ (44; 51ಎ) ವಿಕೆಟ್ ಗಳಿಸಿದರು. ಇದರಿಂದಾಗಿ ಊಟದ ವೇಳೆಗೆ ಪುದುಚೇರಿ ತಂಡವು 6 ವಿಕೆಟ್ಗಳಿಗೆ 110 ರನ್ ಗಳಿಸಿತು.
ವಿರಾಮದ ನಂತರ ಉಳಿದ ನಾಲ್ಕು ವಿಕೆಟ್ಗಳನ್ನು ರೋನಿತ್, ವೈಶಾಖ, ವಿದ್ವತ್ ಮತ್ತು ಸ್ಪಿನ್ನರ್ ಶ್ರೇಯಸ್ ಗೋಪಾಲ್ ತಲಾ ಒಂದರಂತೆ ಹಂಚಿಕೊಂಡರು. ಕೆಳಕ್ರಮಾಂಕದ ಬ್ಯಾಟರ್ಗಳಾದ ಶ್ರೀಧರ್ ಅಶ್ವಥ್ (ಔಟಾಗದೆ 20) ಮತ್ತು ಸಾಗರ್ ಉದೇಶಿ (19 ರನ್) ಸ್ವಲ್ಪ ಪ್ರತಿರೋಧವೊಡ್ಡಿದರು.
ಸಮರ್ಥ್, ಮಯಂಕ್ ಜೊತೆಯಾಟ: ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡದ ಆರಂಭಿಕ ಜೋಡಿ ಸಮರ್ಥ್ ಮತ್ತು ಮಯಂಕ್ ಅವಸರ ಮಾಡಲಿಲ್ಲ. ಪುದುಚೇರಿಯ ಶ್ರೀಧರ್ ಆಶ್ವತ್, ಅಬಿನ್ ಮ್ಯಾಥ್ಯೂ ಮತ್ತು ಸಾಗರ್ ಉದೇಶಿ ಅವರು ಶಿಸ್ತಿನ ದಾಳಿ ನಡೆಸಿದರು. ಎಚ್ಚರಿಕೆಯಿಂದ ಆಡಿದ ಕರ್ನಾಟಕದ ಜೋಡಿ ಮೊದಲ ವಿಕೆಟ್ಗೆ 111 ರನ್ ಸೇರಿಸಿದರು. ಸಮರ್ಥ್ 88 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಅದರಲ್ಲಿ 9 ಬೌಂಡರಿ ಇದ್ದವು. ಮೊದಲ ಪಂದ್ಯದಲ್ಲಿ ಅವರು ಶತಕ ಗಳಿಸಿದ್ದರು.ಮಯಂಕ್ 90 ಎಸೆತಗಳಲ್ಲಿ 50 ರನ್ ಪೂರೈಸಿದರು. ನಂತರದ ಎಸೆತದಲ್ಲಿಯೇ ಅರುಣ್ ಕಾರ್ತಿಕ್ಗೆ ಕ್ಯಾಚಿತ್ತುನಿರ್ಗಮಿಸಿದರು.
ಸ್ಕೋರ್ ಕಾರ್ಡ್
ಪುದುಚೇರಿ ಮೊದಲ ಇನಿಂಗ್ಸ್ 170 (54 ಓವರ್)
ನಯನ್ ಎಲ್ಬಿಡಬ್ಲ್ಯು ವಿದ್ವತ್ 0(11ಎ), ಅರವಿಂದ್ ಸಿ ಮನೀಷ್ ಬಿ ವಿದ್ವತ್ 20 (38ಎ, 4X3), ಜಯ್ ಪಾಂಡೆ ಸಿ ಮನೀಷ್ ಬಿ ರೋನಿತ್ 11 (27ಎ, 4X2), ಪಾರಸ್ ಸಿ ಶರತ್ ಬಿ ವಿದ್ವತ್ 9(33ಎ, 4X1),ರೋಹಿತ್ ಸಿ ವಿಶಾಲ್ ಬಿ ವೈಶಾಖ 44 (75ನಿ, 51ಎ, 4X5, 6X2),ಅರುಣ್ ಸಿ ಶರತ್ ಬಿ ವೈಶಾಖ 16 (20ಎ, 4X2), ಅಂಕಿತ್ ಸಿ ಶ್ರೇಯಸ್ ಬಿ ರೋನಿತ್ 11 (2ಎ, 4X2), ವಿಘ್ನೇಶ್ ಸಿ ಶರತ್ ಬಿ ವೈಶಾಖ 8 (28ಎ, 4X1), ಅಶ್ವಥ್ ಔಟಾಗದೆ 20 (48ಎ, 4X4), ಸಾಗರ್ ಸಿ ಮಯಂಕ್ ಬಿ ವಿದ್ವತ್ 19 (36ಎ, 4X4), ಅಬಿನ್ ಎಲ್ಬಿಡಬ್ಲ್ಯು ಶ್ರೇಯಸ್ 2 (7ಎ)
ಇತರೆ 10 (ಲೆಗ್ಬೈ 10)
ವಿಕೆಟ್ ಪತನ: 1–14 (ನಯನ್; 4.5), 2–31(ಅರವಿಂದ್; 10.1), 3–36 (ಜಯ್ ಪಾಂಡೆ: 14.3), 4–73 (ಡೋಗ್ರಾ; 22.5), 5–101 (ಅರುಣ್ ಕಾರ್ತಿಕ್; 28.4), 6–110 (ರೋಹಿತ್; 30.4), 7-128 (ವಿಘ್ನೇಶ್; 38.1), 8–133 (ಅಂಕಿತ್ ಶರ್ಮಾ; 40.2), 9–163 (ಸಾಗರ್ ಉದೇಶಿ 52.2), 10–170 (ಅಬಿನ್ ಮ್ಯಾಥ್ಯೂ; 53.6)
ಬೌಲಿಂಗ್: ವಿದ್ವತ್ ಕಾವೇರಪ್ಪ 16–3–52–4, ರೋನಿತ್ ಮೋರೆ 12–1–34–2, ವಿಜಯಕುಮಾರ್ ವೈಶಾಖ 13–4–39–3, ಕೆ. ಗೌತಮ್ 11–2–30–0, ಶ್ರೇಯಸ್ ಗೋಪಾಲ್ 2–1–5–1
ಕರ್ನಾಟಕ ಮೊದಲ ಇನಿಂಗ್ಸ್ 1 ವಿಕೆಟ್ಗೆ 111 (32 ಓವರ್)
ಸಮರ್ಥ್ ಬ್ಯಾಟಿಂಗ್ 59 (97ಎ, 4X9),ಮಯಂಕ್ ಸಿ ಅರುಣ್ ಬಿ ಅಂಕಿತ್ 51 (91ಎ, 4X5, 6X1), ರೋನಿತ್ ಬ್ಯಾಟಿಂಗ್ 0 (5ಎ)
ಇತರೆ 1 (ನೋಬಾಲ್ 1)
ವಿಕೆಟ್ ಪತನ: 1–111 (ಮಯಂಕ್ ಅಗರವಾಲ್; 31.1)
ಬೌಲಿಂಗ್: ಎಸ್. ಅಶ್ವಥ್ 11–3–34–0, ಅಬಿನ್ ಮ್ಯಾಥ್ಯೂ 8–2–23–0, ಸಾಗರ್ ಉದೇಶಿ 8–1–25–0, ಎಂ. ವಿಘ್ನೇಶ್ 3–0–21–0, ಅಂಕಿತ್ ಶರ್ಮಾ 2–1–8–1
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.