ಬೆಂಗಳೂರು: ಪ್ರಸಕ್ತ ಸಾಲಿನ ಐಪಿಎಲ್ ಋತುವಿನಲ್ಲಿ ಕೂಡ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು‘ ತಂಡ ಕಪ್ ಗೆಲ್ಲದಿರುವುದಕ್ಕೆ ಆ ತಂಡದ ಅಪಾರ ಅಭಿಮಾನಿಗಳು ತೀವ್ರ ಬೇಸರದಲ್ಲಿದ್ದಾರೆ. ಹಲವರು ಅನೇಕ ಬಗೆಯಲ್ಲಿ ತಮ್ಮ ಸಿಟ್ಟನ್ನು ವ್ಯಕ್ತಪಡಿಸುತ್ತಿದ್ದರೂ, ತಾವು ಎಂದೆಂದಿಗೂ ಆರ್ಸಿಬಿ ಅಭಿಮಾನಿಗಳು ಎಂದು ಅಭಿಮಾನ ಮೆರೆಯುತ್ತಿದ್ದಾರೆ.
ಸುನಿಲ್ ನಾರಾಯಣ್ ಆಲ್ರೌಂಡರ್ ಆಟದ ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಐಪಿಎಲ್ನಲ್ಲಿ ಸೋಮವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ನಾಲ್ಕು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿತು.
ಇದರೊಂದಿಗೆ ಐಪಿಎಲ್ನಲ್ಲಿ ಆರ್ಸಿಬಿಯ ಚೊಚ್ಚಲ ಟ್ರೋಫಿ ಗೆಲ್ಲುವ ಕನಸು ಕೂಡ ಭಗ್ನಗೊಂಡಿತು. ಕೊನೆಗೂ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕಪ್ ಗೆಲ್ಲುವ ಆಸೆಯೂ ಈಡೇರಲಿಲ್ಲ.
ಆರ್ಸಿಬಿ ತಂಡದ ಅಭಿಮಾನಿಯಾಗಿರುವ ನಟ ಕಿಚ್ಚ ಸುದೀಪ್ ಅವರು ಕೂಡ,ಆರ್ಸಿಬಿ ಕಪ್ ಗಲ್ಲದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಆದರೂ ನಾನು ಎಂದೆಂದಿಗೂ ನಿಮ್ಮ ಜೊತೆ ಇರುತ್ತೇನೆ ಎಂದು ಬೆಂಬಲ ಸೂಚಿಸಿದ್ದಾರೆ. ಅಲ್ಲದೇ ನಾಯಕತ್ವ ತೊರೆಯುತ್ತಿರುವ ವಿರಾಟ್ ಕೊಹ್ಲಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಆರ್ಸಿಬಿಗೆ ಇದು ಕೆಟ್ಟ ಸಮಯ. ಈ ಸಾರಿಯ ಐಪಿಎಲ್ ತುಂಬಾ ಸ್ಪರ್ಧೆಯಿಂದ ಕೂಡಿತ್ತು. ಆದರೂ ಆರ್ಸಿಬಿ ಗೆಲುವಿಗಾಗಿ ಅವಿರತವಾಗಿ ಬಡಿದಾಡಿತು‘ ಎಂದಿರುವ ಅವರು, ‘ನೀವು ತೆಗೆದುಕೊಂಡ ನಿರ್ಧಾರ ತುಂಬಾ ಕಠಿಣವಾದದ್ದು. ಫೈನಲ್ ನಲ್ಲಿ ನಾವು ನಿಮ್ಮನ್ನು ಖಂಡಿತ ಮಿಸ್ ಮಾಡಿಕೊಳ್ಳುತ್ತೇವೆ. ಆರ್ಸಿಬಿ ಫಾರ್ಎವರ್‘ ಎಂದಿದ್ದಾರೆ.
ಇನ್ನೊಂದೆಡೆ ಆರ್ಸಿಬಿ ಈ ಸಾರಿಯೂ ಸೋತರೂ ಮುಂದಿನ ಸಲ ಕಪ್ ನಮ್ದೆ ಎಂದು ಕಪ್ ಭಗ್ನ ಅಭಿಮಾನಿಗಳು ಅಭಿಯಾನ ಮುಂದುವರೆಸಿದ್ದಾರೆ.
ಕಪ್ ಗೆಲ್ಲದಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರು, ನಾನು ನಾಯಕತ್ವ ಬಿಟ್ಟರೂ, ಕೊನೆವರೆಗೂ ಆರ್ಸಿಬಿಯಲ್ಲೇ ಆಡುತ್ತೇನೆ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.