ನವದೆಹಲಿ: ಹೋದ ಸಲದ (2022) ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಸೋತ ನಂತರ ಚುಟುಕು ಕ್ರಿಕೆಟ್ ಮಾದರಿಯಲ್ಲಿ ತಂಡದ ನೇತೃತ್ವವನ್ನು ವಹಿಸಲು ರೋಹಿತ್ ಶರ್ಮಾ ಹಿಂಜರಿದಿದ್ದರೂ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಖ್ಯಸ್ಥರು ಅವರ ಮನವೊಲಿಕೆಗೆ ಮುಂದಾಗಲಿದ್ದಾರೆ. ಇದೇ ವೇಳೆ ಮಂಡಳಿಯು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮೂರು ತಂಡಗಳನ್ನು ಗುರುವಾರ ಪ್ರಕಟಿಸಲಿದೆ.
ಬಿಸಿಸಿಐ ಕಾರ್ಯದರ್ಶಿ ಮತ್ತು ಆಯ್ಕೆ ಸಮಿತಿ ಸಂಚಾಲಕ ಜಯ್ ಶಾ ಅವರು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರಕರ್ ಅವರನ್ನು ಇಲ್ಲಿ ಭೇಟಿಯಾಗಲಿದ್ದು, ತಂಡಗಳ ರಚನೆ ಬಗ್ಗೆ ಚರ್ಚಿಸಲಿದ್ದಾರೆ. ಜೊತೆಗೆ ಮುಂದಿನ ಪ್ರಮುಖ ಟೂರ್ನಿ ಆಗಿರುವ ಟಿ20 ವಿಶ್ವಕಪ್ಗೆ ಕಾರ್ಯಯೋಜನೆ ರೂಪಿಸುವ ಬಗ್ಗೆಯೂ ಸಮಾಲೋಚಿಸಲಿದ್ದಾರೆ.
ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರುವಿಶ್ವಕಪ್ ವೇಳೆ ಆದ ಪಾದದ ಸ್ನಾಯು ನೋವಿನಿಂದ ಇನ್ನೊಂದು ತಿಂಗಳು ಹೊರಗಿರಲಿದ್ದಾರೆ. ಹೀಗಾಗಿ ಒಂದೊ ಸೂರ್ಯಕುಮಾರ್ ಅವರಿಗೆ ಹೊಣೆ ವಹಿಸಬೇಕು ಇಲ್ಲವೇ ರೋಹಿತ್ ಶರ್ಮಾ ಅವರ ನಾಯಕತ್ವ ಕೌಶಲದ ಮೇಲೆ ನಂಬಿಕೆಯಿಡಬೇಕಾಗಿದೆ. ಏಕದಿನ ವಿಶ್ವಕಪ್ ವೇಳೆ ರೋಹಿತ್ ನಾಯಕತ್ವ ಮೆಚ್ಚುಗೆಗೆ ಪಾತ್ರವಾಗಿತ್ತು.
ಈ ಮೊದಲು ತಾವು ಟಿ20 ಪಂದ್ಯದಲ್ಲಿ ಆಡಲು ಬಯಸುವುದಿಲ್ಲ ಎಂದು ರೋಹಿತ್ ಹೇಳಿದ್ದರು. ಆದರೆ ಏಕ ದಿನ ವಿಶ್ವಕಪ್ನಲ್ಲಿ ತಂಡ ಮುನ್ನಡೆಸಿದ ರೀತಿ ಗಮನಿಸಿದರೆ ಟಿ20 ವಿಶ್ವಕಪ್ವರೆಗೆ ಅವರೇ ತಂಡದ ನೇತೃತ್ವ ವಹಿಸಲು ಯೋಗ್ಯ ಎಂದು ಬಿಸಿಸಿಐಗೆ ಮನವರಿಕೆಯಾದಂತಿದೆ. ಟಿ20 ನಾಯಕತ್ವಕ್ಕೆ ರೋಹಿತ್ ಒಪ್ಪದೇ ಹೋದಲ್ಲಿ ಸೂರ್ಯಕುಮಾರ್ ಯಾದವ್ ಅವರು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟಿ20 ತಂಡದ ಕಪ್ತಾನ ಆಗಲಿದ್ದಾರೆ ಎಂದು ಈ ಬೆಳವಣಿಗೆಗಳ ಅರಿವಿರುವ ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ.
ವಿರಾಟ್ ಕೊಹ್ಲಿ ಅವರು ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಸೀಮಿತ ಓವರುಗಳ ಕ್ರಿಕೆಟ್ನಿಂದ ವಿರಾಮ ಬಯಸಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಭಾರತ 11 ದಿನಗಳಲ್ಲಿ ಸೀಮಿತ ಓವರುಗಳ ಆರು ಪಂದ್ಯ ಆಡಬೇಕಿದೆ. ಐದು ದಿನಗಳಲ್ಲಿ ಮೂರು ಏಕದಿನ ಪಂದ್ಯ ಆಡಬೇಕಾಗಿದೆ. ಟೆಸ್ಟ್ ಸರಣಿ ಡಿಸೆಂಬರ್ 26ರಂದು ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.