ಕೊಲಂಬೊ: ಶಿಖರ್ ಧವನ್ ನಾಯಕತ್ವದ ಭಾರತ ತಂಡವು ಗುರುವಾರ ಕಳಪೆ ಬ್ಯಾಟಿಂಗ್ಗೆ ಬೆಲೆ ತೆರಬೇಕಾಯಿತು.
ಲೆಗ್ಸ್ಪಿನ್ನರ್ ವಾಣಿಂದು ಹಸರಂಗಾ (9ಕ್ಕೆ4 ವಿಕೆಟ್ ಹಾಗೂ ಔಟಾಗದೆ 14 ರನ್) ಅವರ ಆಲ್ರೌಂಡ್ ಆಟದ ನೆರವಿನಿಂದ ಶ್ರೀಲಂಕಾ ತಂಡವು ಮೂರನೇ ಟ್ವೆಂಟಿ–20 ಪಂದ್ಯದಲ್ಲಿ ಜಯಿಸಿತು.
ಏಳು ವಿಕೆಟ್ಗಳಿಂದ ಪಂದ್ಯ ಗೆದ್ದುಕೊಂಡ ಆತಿಥೇಯ ಬಳಗ 2–1ರಿಂದ ಸರಣಿಯನ್ನೂ ತನ್ನದಾಗಿಸಿಕೊಂಡಿತು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಭಾರತ ತಂಡವು 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 81 ರನ್ ಗಳಿಸಿತ್ತು.
ಸಾಧಾರಣ ಗುರಿ ಬೆನ್ನತ್ತಿದ ಲಂಕಾ, ಇನ್ನೂ 33 ಎಸೆತಗಳು ಬಾಕಿ ಇರುವಂತೆಯೇ ಮೂರು ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು.
ಧನಂಜಯ ಡಿಸಿಲ್ವಾ (ಔಟಾಗದೆ 23) ಹಾಗೂ ವಾಣಿಂದು ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 26 ರನ್ ಸೇರಿಸಿ ತಂಡದ ಜಯವನ್ನು ಸುಲಭಗೊಳಿಸಿದರು.
ಭಾರತ ತಂಡದ ಪರ ರಾಹುಲ್ ಚಾಹರ್ (15ಕ್ಕೆ 3) ಮಾತ್ರ ಬೌಲಿಂಗ್ ನಲ್ಲಿ ಪರಿಣಾಮಕಾರಿ ಎನಿಸಿದರು.
ಬ್ಯಾಟಿಂಗ್ ವೈಫಲ್ಯ: ಭಾರತದ ಪರ ಆರಂಭಿಕ ಬ್ಯಾಟ್ಸ್ಮನ್ ಋತುರಾಜ್ ಗಾಯಕವಾಡ್ (14 ರನ್), ಭುವನೇ ಶ್ವರ್ ಕುಮಾರ್ (16) ಮತ್ತು ಕುಲ ದೀಪ್ ಯಾದವ್ (ಔಟಾಗದೆ 23) ಬಿಟ್ಟರೆ ಉಳಿದವರು ಎರಡಂಕಿ ಮೊತ್ತ ಮುಟ್ಟಲಿಲ್ಲ.
ನಾಯಕ ಶಿಖರ್ ಧವನ್ ಅವರು ಮೊದಲ ಓವರ್ನ ನಾಲ್ಕನೇ ಎಸೆತದಲ್ಲಿ ದುಷ್ಮಂತ ಚಾಮೀರ ಬೌಲಿಂಗ್ನಲ್ಲಿ ಔಟಾದರು. ಖಾತೆಯನ್ನೂ ತೆರೆಯಲಿಲ್ಲ.
ಕರ್ನಾಟಕದ ದೇವದತ್ತ ಪಡಿಕ್ಕಲ್ (9 ರನ್) ನಾಲ್ಕನೇ ಓವರ್ನಲ್ಲಿ ಆಟ ಮುಗಿಸಿದರು. 36 ರನ್ಗಳು ಸೇರುವಷ್ಟರಲ್ಲಿ ಐವರು ಬ್ಯಾಟ್ಸ್ಮನ್ಗಳು ಪೆವಿಲಿಯನ್ ಸೇರಿಯಾಗಿತ್ತು. ಅಗ್ರಕ್ರಮಾಂಕದ ಬ್ಯಾಟ್ಸ್ಮನ್ಗಳು ಸ್ಪಿನ್ ಬೌಲಿಂಗ್ ಎದುರಿಸುವಲ್ಲಿ ವಿಫಲರಾದರು.
ಋತುರಾಜ್ ಗಾಯಕವಾಡ್, ಸಂಜು ಸ್ಯಾಮ್ಸನ್, ಭುವನೇಶ್ವರ್ ಕುಮಾರ್ ಮತ್ತು ವರುಣ್ ಚಕ್ರವರ್ತಿ ಅವರ ವಿಕೆಟ್ಗಳನ್ನು ಹಸರಂಗಾ ತಮ್ಮ ಬುಟ್ಟಿಗೆ ಹಾಕಿಕೊಂಡರು. ಆದರೆ ತಂಡವನ್ನು ಆಲೌಟ್ ಆಗದಂತೆ ತಡೆಯುವಲ್ಲಿ ಭುವನೇಶ್ವರ್ ಮತ್ತು ಕುಲದೀಪ್ ಪ್ರಮುಖ ಪಾತ್ರ ವಹಿಸಿದರು.
ಚೈನಾಮನ್ ಬೌಲರ್ ಕುಲದೀಪ್ 28 ಎಸೆತಗಳನ್ನು ಎದುರಿಸಿದರು. ಭುವಿ 32 ಎಸೆತಗಳನ್ನು ಆಡಿದರು. ಶ್ರೀಲಂಕಾ ಬೌಲರ್ಗಳನ್ನು ಧೈರ್ಯದಿಂದ ಎದುರಿ ಸಿದರು.
ಏಕದಿನ ಸರಣಿಯಲ್ಲಿ ಸೋತಿದ್ದ ಶ್ರೀಲಂಕಾ ತಂಡವು ಟಿ20 ಸರಣಿಯನ್ನು ತನ್ನ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಎರಡನೇ ಪಂದ್ಯ ದಲ್ಲಿಯೂ ಉತ್ತಮ ಬೌಲಿಂಗ್ ಮತ್ತು ಫೀಲ್ಡಿಂಗ್ನಿಂದ ಭಾರತ ತಂಡವನ್ನು ಸೋಲಿಸಿ ಸರಣಿಯಲ್ಲಿ 1–1ರ ಸಮಬಲ ಸಾಧಿಸಿದ್ದರು. ಈ ಪಂದ್ಯದಲ್ಲಿಯೂ ತಮ್ಮ ಸ್ಪಿನ್ ಬೌಲರ್ಗಳ ಬಲದಿಂದ ಭಾರತ ತಂಡವು ನೂರರ ಗಡಿಯನ್ನು ದಾಟದಂತೆ ಶ್ರೀಲಂಕಾ ತಂಡವುನೋಡಿಕೊಂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.