ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮೆ ಕೇಳಿದ ಸಿಎಸ್‌ಕೆ ವೈದ್ಯ ಮಧು

Last Updated 18 ಜೂನ್ 2020, 13:56 IST
ಅಕ್ಷರ ಗಾತ್ರ

ನವದೆಹಲಿ: ಭಾರತ–ಚೀನಾ ಸಂಘರ್ಷದ ಕುರಿತು ತಪ್ಪು ಅಭಿಪ್ರಾಯ ಮೂಡಿಸುವ ಸಂದೇಶವನ್ನು ಟ್ವೀಟ್ ಮಾಡಿಚೆನ್ನೈ ಸೂಪರ್ ಕಿಂಗ್ಸ್‌ ತಂಡದಿಂದ ಅಮಾನತಾಗಿರುವ ವೈದ್ಯ, ಮಧು ತೋಟ್ಟಪಿಲ್ಲಿಲ್‌ ಅವರು ಗುರುವಾರ ಬಹಿರಂಗ ಕ್ಷಮೆಯಾಚಿಸಿದ್ದಾರೆ.

‘ಇದೇ ತಿಂಗಳ 16ರಂದು ನಾನೊಂದು ಟ್ವೀಟ್‌ ಮಾಡಿದ್ದೆ. ಅದರಲ್ಲಿ ಬಳಸಿದ್ದ ಪದಗಳು ಅಸಂಬದ್ಧವಾಗಿದ್ದವು. ಅದರ ಅರಿವಾದ ಕೂಡಲೇ ಟ್ವೀಟ್‌ ಅಳಿಸಿ ಹಾಕಿದ್ದೆ. ಅಷ್ಟರಲ್ಲಾಗಲೇ ನನ್ನ ಟ್ವೀಟ್‌ನ ಸ್ಕ್ರೀನ್‌‌ ಶಾಟ್‌ ತೆಗೆದಿದ್ದ ಕೆಲವರು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಖಂಡಿಸುವುದು ಅಥವಾ ಅವರನ್ನು ಮೂದಲಿಸುವುದು ನನ್ನ ಉದ್ದೇಶವಾಗಿರಲಿಲ್ಲ’ ಎಂದು ಮಧು, ಗುರುವಾರ ಮಾಡಿರುವ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

‘ನನಗೆ ದೇಶ, ದೇಶದ ಯೋಧರು ಹಾಗೂ ಆಡಳಿತರೂಢ ಸರ್ಕಾರದ ಬಗ್ಗೆ ಅಪಾರ ಗೌರವವಿದೆ. ನನ್ನ ಟ್ವೀಟ್‌ನಿಂದ ಸಾಕಷ್ಟು ಜನರಿಗೆ ನೋವಾಗಿರಬಹುದು. ಅದಕ್ಕಾಗಿ ಕ್ಷಮೆ ಕೋರುತ್ತೇನೆ. ಇದು ನನ್ನಿಂದಾದ ಪ್ರಮಾದ. ಇದಕ್ಕಾಗಿ ತಂಡ ಅಥವಾ ಸಂಸ್ಥೆಯೊಂದನ್ನು ದೂರಬೇಡಿ. ನನ್ನ ಹೇಳಿಕೆಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ಇದನ್ನು ದೊಡ್ಡ ವಿವಾದವಾಗಿ ಮಾಡುವುದು ಬೇಡ. ಇದನ್ನು ಇಲ್ಲಿಗೆ ಬಿಟ್ಟುಬಿಡಿ’ ಎಂದು ಅವರು ಮನವಿ ಮಾಡಿದ್ದಾರೆ.

ಮಂಗಳವಾರ ಲಡಾಖ್ ಸಮೀಪದ ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದ ಕುರಿತು ಮಾಧ್ಯಮಗಳಲ್ಲಿ ಸುದ್ದಿಗಳು ಬಿತ್ತರವಾದ ಬೆನ್ನಲ್ಲೇ ಮಧು ಅವರು ಕೇಂದ್ರ ಸರ್ಕಾರದ ವಿರುದ್ಧ ಅವಹೇಳನಕಾರಿಯಾಗಿ ಟ್ವೀಟ್‌ ಮಾಡಿದ್ದರು. ತಮ್ಮ ತಪ್ಪಿನ ಅರಿವಾದ ಕೂಡಲೇ ಆ ಸಂದೇಶವನ್ನು ಅಳಿಸಿಹಾಕಿದ್ದರು.

ಐಪಿಎಲ್ ಚೊಚ್ಚಲ ಆವೃತ್ತಿಯಿಂದಲೂ (2008) ಮಧು ಅವರು ಚೆನ್ನೈ ತಂಡದ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT