ಡಬ್ಲಿನ್: ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ತಂಡವು ಭಾನುವಾರ ನಡೆಯಲಿರುವ ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.
ಎರಡು ಪಂದ್ಯಗಳ ಈ ಸರಣಿಯಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಭಾರತ ತಂಡದ ಹಂಗಾಮಿ ಕೋಚ್ ಆಗಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದ ಟೆಸ್ಟ್ ತಂಡವು ಲೀಸ್ಟರ್ ನಲ್ಲಿ ಅಭ್ಯಾಸ ಪಂದ್ಯವಾಡುತ್ತಿದೆ. ರಾಹುಲ್ ದ್ರಾವಿಡ್ ಈ ತಂಡದೊಂದಿಗೆ ಇದ್ದಾರೆ.
ಹಾರ್ದಿಕ್ ಬಳಗದಲ್ಲಿ ಸೂರ್ಯಕುಮಾರ್ ಯಾದವ್, ವಿಕೆಟ್ಕೀಪರ್ ಸಂಜು ಸ್ಯಾಮ್ಸನ್, ಯುವ ಆಟಗಾರರಾದ ಇಶಾನ್ ಕಿಶನ್, ಋತುರಾಜ್ ಗಾಯಕವಾಡ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಯಜುವೇಂದ್ರ ಚಾಹಲ್ ಮತ್ತು ಉಮ್ರನ್ ಮಲೀಕ್ ಅವರು ಇದ್ದಾರೆ.
ಈಚೆಗೆ ಭಾರತದಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಆಡಿದ್ದ ಬಹುತೇಕರು ಈ ತಂಡದಲ್ಲಿದ್ದಾರೆ. ಆ್ಯಂಡ್ರ್ಯೂ ಬಲ್ಬಿರ್ನಿ ನಾಯಕತ್ವದ ಐರ್ಲೆಂಡ್ ಬಳಗವು ಹಾರ್ದಿಕ್ ಬಳಗವನ್ನು ಎದುರಿಸಲು ಸಿದ್ಧವಾಗಿದೆ.