ನವದೆಹಲಿ: ಟಿ–20 ವಿಶ್ವಕಪ್ ಟೂರ್ನಿಯಲ್ಲಿ ಬುಧವಾರ ನಡೆದ ಅಫ್ಗಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಳಲ್ಲೂ ಉತ್ತಮ ಪ್ರದರ್ಶನ ನೀಡುವ ಮೂಲಕ ಗೆಲುವು ಸಾಧಿಸಿದೆ ಎಂದು ಹಿರಿಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶೇಖ್ ಝಯೇದ್ ಕ್ರೀಡಾಂಗಣದಲ್ಲಿ ನಡೆದ ಸೂಪರ್ 12ರ ಎರಡನೇ ಗುಂಪಿನ ಈ ಪಂದ್ಯದಲ್ಲಿ ಅಫ್ಗಾನಿಸ್ತಾನ ವಿರುದ್ಧ ಆಲ್ರೌಂಡ್ ಆಟವಾಡಿದ ಭಾರತ 66 ರನ್ಗಳ ಜಯ ಸಾಧಿಸಿತು.
ಪಂದ್ಯದ ಕುರಿತು ಮಾತನಾಡಿದ ಸೆಹ್ವಾಗ್, ‘ಟೀಮ್ ಇಂಡಿಯಾದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದ ಸಕಾರಾತ್ಮಕ ಉದ್ದೇಶದಿಂದ ಅಫ್ಗನ್ ವಿರುದ್ಧ ಜಯ ಸಾಧ್ಯವಾಗಿದೆ. ಆಟಗಾರರು ಕ್ಯಾಚ್ಗಳನ್ನು ಕೈಚೆಲ್ಲದೆ ಉತ್ತಮ ರೀತಿಯಲ್ಲಿ ಫೀಲ್ಡಿಂಗ್ ಮಾಡಿದರು. ಇದರಿಂದ ಭಾರತಕ್ಕೆ ಗೆಲುವು ಸಾಧಿಸಲು ಸಾಧ್ಯವಾಯಿತು. ಮುಂದಿನ ಪಂದ್ಯಗಳಲ್ಲೂ ಭಾರತ ಇದೇ ರೀತಿಯ ಪ್ರದರ್ಶನ ತೋರಬೇಕು. ನಾವು ಎದುರಾಳಿ ತಂಡದ ವಿರುದ್ಧ ಧೈರ್ಯವಾಗಿ ಹೋರಾಟ ನಡೆಸಬೇಕೇ ಹೊರತು ಸುಲಭವಾಗಿ ಶರಣಾಗಬಾರದು’ ಎಂದು ಸಲಹೆ ನೀಡಿದ್ದಾರೆ.