ನವದೆಹಲಿ: ಈ ವರ್ಷದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯನ್ನು ಎರಡು ಹಂತಗಳಲ್ಲಿ ಆಯೋಜಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಚಿಂತನೆ ನಡೆಸಿದೆ ಎಂದು ಖಜಾಂಚಿ ಅರುಣ ಧುಮಾಲ್ ತಿಳಿಸಿದ್ದಾರೆ.
ಜನವರಿ 13ರಂದು ಟೂರ್ನಿಯು ಆರಂಭವಾಗಬೇಕಿತ್ತು. ಆದರೆ, ದೇಶದಲ್ಲಿ ಕೋವಿಡ್ ಪ್ರಸರಣ ಹೆಚ್ಚಿದ ಕಾರಣ ಟೂರ್ನಿಯನ್ನು ಮುಂದೂಡಲಾಯಿತು.
ಮಾರ್ಚ್ 27ರಿಂದ ಐಪಿಎಲ್ ಆರಂಭಿಸಲು ಈಚೆಗಷ್ಟೇ ಮಂಡಳಿಯ ಸಭೆಯಲ್ಲಿ ಚರ್ಚಿಸಲಾಗಿತ್ತು. ಆದ್ದರಿಂದ ರಣಜಿ ಟೂರ್ನಿಯನ್ನು ಒಂದೇ ಹಂತದಲ್ಲಿ ಮುಗಿಸಲು ಸಾಧ್ಯವಾಗುವುದಿಲ್ಲ.
‘ಕೋವಿಡ್ ಪ್ರಕರಣಗಳು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ರಣಜಿ ಟೂರ್ನಿಯನ್ನು ಮುಂದಿನ ತಿಂಗಳು ಆರಂಭಿಸುವತ್ತ ಚಿಂತನೆ ನಡೆದಿದೆ. ಮೊದಲ ಹಂತವನ್ನು ನಡೆಸಿ ಐಪಿಎಲ್ ಮುಗಿದ ನಂತರ ಎರಡನೇ ಹಂತ ಆಯೋಜಿಸುವ ಸಾಧ್ಯತೆ ಇದೆ’ ಎಂದು ಧುಮಾಲ್ ಹೇಳಿದ್ದಾರೆ.