ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಸೋಲಿಗೆ ಮೊಹಮ್ಮದ್ ಶಮಿ ಕಾರಣ ಎಂದು ಆನ್ಲೈನ್ನಲ್ಲಿ ವ್ಯಾಪಕವಾಗಿ ನಿಂದಿಸಲಾಗಿದೆ. ವಿವಾದ ಭುಗಿಲೆದ್ದಿರುವ ಬೆನ್ನಲ್ಲೇ ಭಾರತದ ಮಾಜಿ ಹಾಗೂ ಸಮಕಾಲೀನ ಕ್ರಿಕೆಟಿಗರು ಶಮಿಗೆ ಬೆಂಬಲವನ್ನು ಸೂಚಿಸಿದ್ದಾರೆ.
ಕ್ರಿಕೆಟ್ನ ಆರಾಧ್ಯ ದೈವ, ಮಾಜಿ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡ ಶಮಿಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದಾರೆ.
'ನಾವು ಟೀಮ್ ಇಂಡಿಯಾವನ್ನು ಬೆಂಬಲಿಸುವಾಗ ಭಾರತ ತಂಡದ ಪ್ರತಿಯೊಬ್ಬ ಆಟಗಾರರನ್ನು ಬೆಂಬಲಿಸುತ್ತೇವೆ. ಮೊಹಮ್ಮದ್ ಶಮಿ ಬದ್ಧ ಹಾಗೂ ವಿಶ್ವದರ್ಜೆಯ ಬೌಲರ್. ಇತರೆಲ್ಲ ಕ್ರಿಕೆಟಿಗರಂತೆ ಅವರಿಗೂ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಶಮಿ ಹಾಗೂ ಟೀಮ್ ಇಂಡಿಯಾಗೆ ನಾನು ಬೆಂಬಲ ಸೂಚಿಸುತ್ತೇನೆ' ಎಂದಿದ್ದಾರೆ.
When we support #TeamIndia, we support every person who represents Team India. @MdShami11 is a committed, world-class bowler. He had an off day like any other sportsperson can have.
ಮೊಹಮ್ಮದ್ ಶಮಿ ಅವರ ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಶಮಿ ಧರ್ಮವನ್ನು ಎಳೆದು ತಂದಿದ್ದು, 'ದೇಶದ್ರೋಹಿ ಶಮಿ ಪಾಕಿಸ್ತಾನಕ್ಕೆ ತೊಲಗುವಂತೆ' ಕಮೆಂಟ್ ಹಾಕಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ನಾವೆಲ್ಲರೂ ನಿಮ್ಮ ಜೊತೆಗಿರುವುದಾಗಿ ಶಮಿಗೆ ಬೆಂಬಲ ಸೂಚಿಸಿದ್ದಾರೆ. ಇಂತಹ ಜನರು ದ್ವೇಷದಿಂದ ಕೂಡಿರುತ್ತಾರೆ. ಯಾಕೆಂದರೆ ಅವರನ್ನು ಯಾರೂ ಪ್ರೀತಿಸುವುದಿಲ್ಲ. ಅವರನ್ನು ಕ್ಷಮಿಸಿ' ಎಂದು ಹೇಳಿದ್ದಾರೆ.