ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್ ಅಂಗಣದಲ್ಲಿ ಕನ್ನಡಿಗರ ಕಹಳೆ

Last Updated 4 ಜೂನ್ 2019, 16:41 IST
ಅಕ್ಷರ ಗಾತ್ರ

ವಿಶ್ವದ ಶ್ರೇಷ್ಠ ಆಟಗಾರರು ಪೈಪೋಟಿ ನಡೆಸುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅಂಗಣದಲ್ಲಿ ಕನ್ನಡಿಗ ಕಲಿಗಳು ಕೂಡಾ ಕಾದಾಡಿದ್ದಾರೆ. ಜಿ.ಆರ್.ವಿಶ್ವನಾಥ್ ಮತ್ತು ಬ್ರಿಜೇಶ್ ಪಟೇಲ್ ಹಾಕಿಕೊಟ್ಟ ಹಾದಿಯಲ್ಲಿ ಮುನ್ನಡೆದು ರೋಜರ್ ಬಿನ್ನಿ, ಸೈಯದ್ ಕಿರ್ಮಾನಿ, ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್ ಮುಂತಾದವರು ಹೆಸರು ಮಾಡಿದ್ದಾರೆ. ರಾಹುಲ್ ದ್ರಾವಿಡ್ ಅವರಿಗೆ ಭಾರತ ತಂಡವನ್ನು ಮುನ್ನಡೆಸಿದ ಶ್ರೇಯವೂ ಇದೆ. ಅವಕಾಶ ಪಡೆದ ಕನ್ನಡಿಗರ ಪೈಕಿ ಹೆಚ್ಚಿನವರು ಮಿಂಚಿದ್ದಾರೆ. ನಿರಾಸೆ ಅನುಭವಿಸಿದವರೂ ಇದ್ದಾರೆ.

ಈ ಬಾರಿಯ ವಿಶ್ವಕಪ್ ಟೂರ್ನಿಯ ‘ಅಭ್ಯಾಸ’ದಲ್ಲಿ ಶತಕ ಸಿಡಿಸಿದ ಕೆ.ಎಲ್.ರಾಹುಲ್ ಭಾರತ ತಂಡದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಬ್ಯಾಟ್ಸ್‌ಮನ್ ಯಾರು ಎಂಬ ಗೊಂದಲಕ್ಕೆ ಪರಿಹಾರ ನೀಡಿದ್ದರು. ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಮತ್ತು ಕನ್ನಡಿಗರ ಭರವಸೆಯಾಗಿ ಅವರು ಕಣಕ್ಕೆ ಇಳಿಯಲಿದ್ದಾರೆ. ವಿಶ್ವಕಪ್‌ನಲ್ಲಿ ಈ ಹಿಂದೆಯೂ ಕನ್ನಡಿಗರನೇಕರು ಅಪಾರ ಸಾಧನೆ ಮಾಡಿದ್ದಾರೆ.

ಮೊದಲ ವಿಶ್ವಕಪ್ ಟೂರ್ನಿ ನಡೆದ 1975ರಲ್ಲೇ ಭಾರತ ತಂಡದಲ್ಲಿ ಇಬ್ಬರು ಸ್ಥಾನ ಗಳಿಸಿದ್ದರು. ಅವರು ಜಿ.ಆರ್.ವಿಶ್ವನಾಥ್ ಮತ್ತು ಬ್ರಿಜೇಶ್ ಪಟೇಲ್‌. ಭಾರತದ ಮೊದಲ ಪಂದ್ಯ ಜೂನ್ ಏಳರಂದು ಇಂಗ್ಲೆಂಡ್ ಎದುರು ನಡೆದಿತ್ತು. ಆ ಪಂದ್ಯದಲ್ಲಿ ಇವರಿಬ್ಬರು ಕ್ರಮವಾಗಿ ನಾಲ್ಕು ಮತ್ತು ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿದಿದ್ದರು. ವಿಶ್ವನಾಥ್‌ 59 ಎಸೆತಗಳಲ್ಲಿ ಐದು ಬೌಂಡರಿಗಳೊಂದಿಗೆ 37 ರನ್ ಗಳಿಸಿದ್ದರೆ, ಬ್ರಿಜೇಶ್ 57 ಎಸೆತಗಳಲ್ಲಿ ಔಟಾಗದೆ 16 ರನ್ ಗಳಿಸಿದ್ದರು.ಪಂದ್ಯದಲ್ಲಿ ಭಾರತ 202 ರನ್‌ಗಳಿಂದ ಸೋತಿತ್ತು.

ಎರಡನೇ ಪಂದ್ಯದಲ್ಲಿ ಈಸ್ಟ್ ಸೆಂಟ್ರಲ್ ಆಫ್ರಿಕಾ ವಿರುದ್ಧ 10 ವಿಕೆಟ್‌ಗಳಿಂದ ಭಾರತ ಗೆದ್ದಿತ್ತು. ಹೀಗಾಗಿ ಇವರಿಬ್ಬರು ಕ್ರೀಸ್‌ಗೆ ಇಳಿಯುವ ‘ಪ್ರಮೇಯವೇ’ ಇರಲಿಲ್ಲ.ನ್ಯೂಜಿಲೆಂಡ್ ಎದುರಿನ ಮೂರನೇ ಪಂದ್ಯದಲ್ಲಿ ವಿಶ್ವನಾಥ್ ಎರಡು, ಪಟೇಲ್ ಒಂಬತ್ತು ರನ್ ಕಲೆ ಹಾಕಿದ್ದರು. ಪಂದ್ಯದಲ್ಲಿ ನ್ಯೂಜಿಲೆಂಡ್ ನಾಲ್ಕು ವಿಕೆಟ್‌ಗಳಿಂದ ಜಯಿಸಿತ್ತು.1979ರ ವಿಶ್ವಕಪ್‌ನಲ್ಲಿ ಜಿ. ಆರ್‌.ವಿಶ್ವನಾಥ್ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 15ನೇ ಸ್ಥಾನ ಗಳಿಸಿದರು. ಅವರು ಮೂರು ಪಂದ್ಯಗಳಲ್ಲಿ ಒಂದು ಅರ್ಧಶತಕದೊಂದಿಗೆ 106 ರನ್ ಗಳಿಸಿದ್ದರು. ಬ್ರಿಜೇಶ್ ಮೂರು ಪಂದ್ಯಗಳಲ್ಲಿ 63 ರನ್ ಸೇರಿಸಿದ್ದರು.

ಭಾರತ ಮೊದಲ ವಿಶ್ವಕಪ್ ಗೆದ್ದ 1983ರಲ್ಲಿ ಕೂಡ ಇಬ್ಬರು ಕನ್ನಡಿಗರು ತಂಡದಲ್ಲಿದ್ದರು. ಮಧ್ಯಮ ವೇಗಿ ರೋಜರ್ ಬಿನ್ನಿ ಮತ್ತು ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ ತಂಡದ ಯಶಸ್ಸಿಗೆ ಕಾರಣರಾಗಿದ್ದರು. ವೆಸ್ಟ್ ಇಂಡೀಸ್ ಎದುರು 34 ರನ್‌ಗಳಿಂದ ಗೆದ್ದ ಮೊದಲ ಪಂದ್ಯದಲ್ಲಿ ಬಿನ್ನಿ 27 ರನ್ ಗಳಿಸಿದ್ದರೆ ಕಿರ್ಮಾನಿ ಒಂದು ರನ್ ಗಳಿಸಿದ್ದರು. ಬಿನ್ನಿ ಮೂರು ವಿಕೆಟ್ ಕಬಳಿಸಿದ್ದರು. ಬಿನ್ನಿ – ಕಿರ್ಮಾನಿ ಜೋಡಿ ಅಪಾಯಕಾರಿ ವಿವಿಯನ್ ರಿಚರ್ಡ್ಸ್ ಅವರನ್ನು ವಾಪಸ್ ಕಳುಹಿಸಿದ್ದರು.ಭಾರತ ತನ್ನ ಎರಡನೇ ಪಂದ್ಯದಲ್ಲಿ ಜಿಂಬಾಬ್ವೆಯನ್ನು ಐದು ವಿಕೆಟ್‌ಗಳಿಂದ ಮಣಿಸಿತ್ತು. ಬಿನ್ನಿ ಎರಡು ವಿಕೆಟ್ ಗಳಿಸಿದ್ದರು. ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲೂ ಬಿನ್ನಿ ಒಂದು ವಿಕೆಟ್ ಕಬಳಿಸಿದ್ದರು. ಕಿರ್ಮಾನಿ ಖಾತೆಗೆ ಸೇರಿದ್ದು 12 ರನ್.

ವೆಸ್ಟ್ ಇಂಡೀಸ್ ಎದುರು ಬಿನ್ನಿ ಮೂರು ವಿಕೆಟ್ ಕಬಳಿಸಿದ್ದರು. ಜಿಂಬಾಬ್ವೆ ವಿರುದ್ಧ ಬಿನ್ನಿ 22 ಮತ್ತು ಕಿರ್ಮಾನಿ ಅಜೇಯ 24 ರನ್ ಗಳಿಸಿದ್ದರು. ಬಿನ್ನಿ ಎರಡು ವಿಕೆಟ್ ಕೂಡ ಕಬಳಿಸಿದ್ದರು.ಆಸ್ಟ್ರೇಲಿಯಾ ಎದುರಿನ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತ 118 ರನ್‌ಗಳ ಜಯಭೇರಿ ಮೊಳಗಿಸಿತ್ತು. ಬಿನ್ನಿ ಅಜೇಯ 21, ಕಿರ್ಮಾನಿ 10 ರನ್ ಗಳಿಸಿದ್ದರು. 29ಕ್ಕೆ4 ವಿಕೆಟ್ ಕಬಳಿಸಿದ ಬಿನ್ನಿ ಗೆಲುವಿನ ರೂವಾರಿಯಾಗಿದ್ದರು.

ಸೆಮಿಫೈನಲ್‌ನಲ್ಲಿ ಭಾರತ ಆತಿಥೇಯರನ್ನು ಆರು ವಿಕೆಟ್‌ಗಳಿಂದ ಮಣಿಸಿತ್ತು. ಎರಡು ವಿಕೆಟ್ ಬಿನ್ನಿ ಪಾಲಾಗಿದ್ದವು. 43 ರನ್‌ಗಳಿಂದ ಹಾಲಿ ಚಾಂಪಿಯನರನ್ನು ಮಣಿಸಿ ಕಪ್ ಎತ್ತಿ ಹಿಡಿದ ಪಂದ್ಯದಲ್ಲಿ ಬಿನ್ನಿ ಎರಡು ಮತ್ತು ಕಿರ್ಮಾನಿ 14 ರನ್ ಗಳಿಸಿದ್ದರು. ಒಂದು ವಿಕೆಟ್ ಬಿನ್ನಿ ಪಾಲಾಗಿತ್ತು. ಎಂಟು ಪಂದ್ಯಗಳಲ್ಲಿ 18 ಬಲಿ ಪಡೆದಿದ್ದ ಬಿನ್ನಿ ಹೆಚ್ಚು ವಿಕೆಟ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದರು.

1987ರಲ್ಲಿ ರೋಜರ್ ಬಿನ್ನಿ ಒಬ್ಬರೇ ಕರ್ನಾಟಕದ ಪ್ರತಿನಿಧಿಯಾಗಿ ಇದ್ದವರು. ಚೆನ್ನೈನಲ್ಲಿ ನಡೆದ ಆಸ್ಟ್ರೇಲಿಯಾ ಎದುರಿನ ಮೊದಲ ಪಂದ್ಯದಲ್ಲಿ ಒಂದು ವಿಕೆಟ್ ಗಳಿಸಿದ್ದ ಅವರು ಶೂನ್ಯಕ್ಕೆ ರನ್ ಔಟಾಗಿದ್ದರು. ಆದರೆ ಬೆಂಗಳೂರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಿಂದ ಕೈಬಿಟ್ಟ ಅವರಿಗೆ ಮತ್ತೆ ಅವಕಾಶ ಸಿಗಲಿಲ್ಲ.

1992ರಲ್ಲಿ ತಂಡದಲ್ಲಿದ್ದ ಕರ್ನಾಟಕದ ಏಕೈಕ ಆಟಗಾರ ಜಾವಗಲ್ ಶ್ರೀನಾಥ್. ಆಸ್ಟ್ರೇಲಿಯಾ ವಿರುದ್ಧ ರೋಚಕ ಒಂದು ರನ್‌ನಿಂದ ಸೋತ ಪಂದ್ಯದಲ್ಲಿ ಶ್ರೀನಾಥ್ ಎಂಟು ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು;ಏಳು ಪಂದ್ಯಗಳಲ್ಲಿ ಎಂಟು ವಿಕೆಟ್ ಕಬಳಿಸಿದ್ದರು.

1996ರಲ್ಲಿ ಬೌಲಿಂಗ್ ದಿಗ್ಗಜರಾದ ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ ಮತ್ತು ವೆಂಕಟೇಶ್ ಪ್ರಸಾದ್ ಭಾರತ ತಂಡದ ಬೆನ್ನೆಲುಬಾದರು. ಹೆಚ್ಚು ವಿಕೆಟ್ ಕಬಳಿಸಿದವರ ಪಟ್ಟಿಯಲ್ಲಿ ಕುಂಬ್ಳೆ ಮೊದಲ ಸ್ಥಾನ ಗಳಿಸಿದ್ದರು. ಮೂವರೂ ತಲಾ ಏಳು ಪಂದ್ಯಗಳನ್ನು ಆಡಿದ್ದರು. ಕುಂಬ್ಳೆ 15 ವಿಕೆಟ್ ಉರುಳಿಸಿದ ಶ್ರೀನಾಥ್ ಮತ್ತು ಪ್ರಸಾದ್ ಖಾತೆಯಲ್ಲಿ ತಲಾ ಎಂಟು ವಿಕೆಟ್‌ಗಳಿದ್ದವು.

ನಾಲ್ವರು ಕನ್ನಡಿಗರಿಗೆ ಅವಕಾಶ

1999ರಲ್ಲಿ ನಾಲ್ವರು ಕನ್ನಡಿಗರು ಭಾರತ ತಂಡದಲ್ಲಿದ್ದರು.ಎಂಟು ಪಂದ್ಯಗಳನ್ನಾಡಿದ ರಾಹುಲ್ ದ್ರಾವಿಡ್ ಎರಡು ಶತಕ ಮತ್ತು ಮೂರು ಅರ್ಧಶತಕಗಳೊಂದಿಗೆ 461 ರನ್ ಗಳಿಸಿ ಟೂರ್ನಿಯಲ್ಲಿ ಗರಿಷ್ಠ ರನ್ ಕಲೆ ಹಾಕಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಬೌಲಿಂಗ್‌ನಲ್ಲೂ ಕರ್ನಾಟಕದ ಆಟಗಾರರು ಅಮೋಘ ಸಾಧನೆ ಮಾಡಿದರು. ಶ್ರೀನಾಥ್ ಎಂಟು ಪಂದ್ಯಗಳಲ್ಲಿ 12 ವಿಕೆಟ್ ಗಳಿಸಿದರೆ, ವೆಂಕಟೇಶ್ ಪ್ರಸಾದ್ ಏಳು ಪಂದ್ಯಗಳಲ್ಲಿ ಒಂಬತ್ತು ಮತ್ತು ಕುಂಬ್ಳೆ ಅಷ್ಟೇ ಪಂದ್ಯಗಳಲ್ಲಿ ಎಂಟು ವಿಕೆಟ್ ಉರುಳಿಸಿದ್ದರು.

2003ರಲ್ಲಿ ವೆಂಕಟೇಶ್ ಪ್ರಸಾದ್ ಹೊರತುಪಡಿಸಿ ಉಳಿದ ಮೂವರು ಕನ್ನಡಿಗರು ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದರು. ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ 13ನೇ ಸ್ಥಾನ ತಮ್ಮದಾಗಿಸಿಕೊಂಡರು. 11 ಪಂದ್ಯಗಳಲ್ಲಿ 318 ರನ್ ಅವರ ಸಂಪಾದನೆಯಾಗಿತ್ತು. ಎರಡು ಅರ್ಧಶತಕಗಳು ಅವರ ಖಾತೆಯಲ್ಲಿದ್ದವು.11 ಪಂದ್ಯಗಳಲ್ಲಿ 16 ವಿಕೆಟ್ ಬುಟ್ಟಿಗೆ ಹಾಕಿಕೊಂಡಿದ್ದ ಶ್ರೀನಾಥ್ ಹೆಚ್ಚು ವಿಕೆಟ್ ಗಳಿಸಿದವರ ಪಟ್ಟಿಯಲ್ಲಿ ಏಳನೇ ಸ್ಥಾನ ಗಳಿಸಿದರು.

2007ರ ವಿಶ್ವಕಪ್ ಕನ್ನಡಿಗರ ಪಾಲಿಗೆ ಸ್ಮರಣೀಯ. ಈ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದು ರಾಹುಲ್ ದ್ರಾವಿಡ್. ರಾಬಿನ್ ಉತ್ತಪ್ಪ ಮೊದಲ ಬಾರಿ ವಿಶ್ವಕಪ್ ಆಡಿದ್ದರು.

2011ರಲ್ಲಿ ಭಾರತ ಮತ್ತೊಮ್ಮೆ ವಿಶ್ವಕಪ್ ಗೆದ್ದಿತು. ಈ ಟೂರ್ನಿಯಲ್ಲಿ ಆಡಿದ ಭಾರತ ತಂಡದಲ್ಲಿ ಕನ್ನಡಿಗರು ಇರಲಿಲ್ಲ. ಇದು, ಕನ್ನಡಿಗರಿಲ್ಲದ ಮೊದಲ ವಿಶ್ವಕಪ್ ತಂಡವೂ ಆಗಿತ್ತು.ಕಳೆದ ಬಾರಿ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ ಸ್ಥಾನ ಗಳಿಸಿದ್ದರೂ ಅವರಿಗೆ ಒಂದು ಪಂದ್ಯದಲ್ಲೂ ಆಡುವ ಅವಕಾಶ ಲಭಿಸಲಿಲ್ಲ. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT