ವಿಜಯಪುರ: ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಸಂಸ್ಥೆಯು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ನಗರದ ಹೊರವಲಯದ ಭೂತನಾಳ ಕೆರೆ ಸಮೀಪ ಸೆ. 14 ಮತ್ತು 15ರಂದು 15ನೇ ರಾಜ್ಯ ಮಟ್ಟದ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್ಷಿಪ್ ಹಮ್ಮಿಕೊಂಡಿದೆ.
‘ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಸುಮಾರು 200 ಕ್ರೀಡಾಪಟುಗಳು ಹಾಗೂ 50 ಜನ ಕ್ರೀಡಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
14, 16 ಹಾಗೂ 18 ವಯೋಮಾನದ ಬಾಲಕ, ಬಾಲಕಿಯರು ಹಾಗೂ ಪುರುಷ, ಮಹಿಳೆಯರಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳು ನಡೆಯಲಿವೆ’ ಎಂದು ಜಿಲ್ಲಾ ಅಮೆಚೂರ್ ಸಂಸ್ಥೆ ಅಧ್ಯಕ್ಷ ರಾಜು ಎಸ್.ಬಿರಾದಾರ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ಮಟ್ಟದ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಪ್ರತಿ ವಿಭಾಗದ ಇಬ್ಬರು ಸೈಕ್ಲಿಸ್ಟ್ಗಳನ್ನು ಅಕ್ಟೋಬರ್ ಕೊನೆಯಲ್ಲಿ ಪುಣೆಯಲ್ಲಿ ನಡೆಯಲಿರುವ ರಾಷ್ಟ್ರೀಯ ಟೂರ್ನಿಗೆ ಆಯ್ಕೆ ಮಾಡಲಾಗುತ್ತದೆ.
ಆಸಕ್ತರು ಸೆ. 13ರ ಸಂಜೆ ನಾಲ್ಕು ಗಂಟೆಯೊಳಗೆ ಸೊಲ್ಲಾಪುರ ರಸ್ತೆಯ ಜಿಲ್ಲಾ ಸೈಕ್ಲಿಂಗ್ ಕ್ರೀಡಾ ನಿಲಯದಲ್ಲಿ ಹೆಸರು ನೋಂದಾಯಿಸಬೇಕು.
ಹೆಚ್ಚಿನ ಮಾಹಿತಿಗೆ ರಾಜು ಎಸ್.ಬಿರಾದಾರ ಮೊ. 94800 79999 ಸಂಪರ್ಕಿಸಲು ತಿಳಿಸಲಾಗಿದೆ.