ವಾಸ್ಕೊ, ಗೋವಾ: ಕೇರಳ ಬ್ಲಾಸ್ಟರ್ಸ್ ತಂಡವು ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಮೊದಲ ಜಯ ದಾಖಲಿಸಿತು.
ಭಾನುವಾರ ತಿಲಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೇರಳ ತಂಡವು 2–1ರಿಂದ ಒಡಿಶಾ ಫುಟ್ಬಾಲ್ ಕ್ಲಬ್ ಎದುರು ಜಯಿಸಿತು.
ಅಲ್ವೆರೊ ವಾಕೇಜ್ (62ನೇ ನಿ) ಮತ್ತು ಬದಲೀ ಆಟಗಾರ ಪ್ರಶಾಂತ್ ಕರುತಾಡತಕಣಿ (85ನಿ) ಅವರು ಎರಡನೇ ಅವಧಿಯಲ್ಲಿ ಹೊಡೆದ ಗೋಲುಗಳ ಬಲದಿಂದ ಕೇರಳ ತಂಡವು ಜಯಿಸಿತು. ಒಡಿಶಾ ತಂಡದಲ್ಲಿರುವ ಬೆಂಗಳೂರು ಹುಡುಗ ನಿಖಿಲ್ ರಾಜ್ ಗೋಲು ಹೊಡೆದರು.
ಪಾಯಿಂಟ್ ಪಟ್ಟಿಯಲ್ಲಿ ಕೇರಳ ತಂಡವು ಆರನೇ ಸ್ಥಾನಕ್ಕೇರಿತು. ತಂಡದ ಖಾತೆಯಲ್ಲಿ ಐದು ಅಂಕಗಳಿವೆ. ಒಡಿಶಾ ಆರು ಪಾಯಿಂಟ್ಸ್ನೊಂದಿಗೆ ಮೂರನೇ ಸ್ಥಾನದಲ್ಲಿ ಮುಂದುವರಿದಿದೆ.
ಮೊದಲಾರ್ಧದಲ್ಲಿ ಉಭಯ ತಂಡಗಳೂ ಸಮಬಲ ಸಾಧಿಸಿದ್ದವು. ಆದರೆ, ವಿರಾಮದ ನಂತರ ನಡೆದ ತುರುಸಿನ ಪೈಪೋಟಿಯಲ್ಲಿ ಕೇರಳ ಮೇಲುಗೈ ಸಾಧಿಸಿತು.