ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌ ಫುಟ್‌ಬಾಲ್‌: ಕೇರಳ ಬ್ಲಾಸ್ಟರ್ಸ್ ಮಣಿಸಿದ ಬೆಂಗಳೂರು ಎಫ್‌ಸಿ

Last Updated 12 ಫೆಬ್ರುವರಿ 2023, 5:45 IST
ಅಕ್ಷರ ಗಾತ್ರ

ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರ ಮುಂದೆ ಕಾಲ್ಚಳಕ ಮೆರೆದ ಬೆಂಗಳೂರು ಎಫ್‌ಸಿ ತಂಡ, ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಸತತ ಆರನೇ ಪಂದ್ಯ ಗೆದ್ದು ಸಂಭ್ರಮಿಸಿತು.

ಶನಿವಾರ ನಡೆದ ಪಂದ್ಯದಲ್ಲಿ ರಾಯ್‌ ಕೃಷ್ಣ ಗಳಿಸಿದ ಗೋಲಿನ ನೆರವಿನಿಂದ ಬಿಎಫ್‌ಸಿ 1–0ಯಿಂದ ಪ್ರಬಲ ಕೇರಳ ಬ್ಲಾಸ್ಟರ್ಸ್ ತಂಡವನ್ನು ಮಣಿಸಿತು. ಈ ಜಯದಿಂದ ಬೆಂಗಳೂರಿನ ತಂಡದ ‘ಪ್ಲೇ ಆಫ್‌’ ಪ್ರವೇಶ ಸಾಧ್ಯತೆಗೆ ಇನ್ನಷ್ಟು ಬಲ ಬಂದಿದೆ. 18 ಪಂದ್ಯಗಳಿಂದ 28 ಪಾಯಿಂಟ್ಸ್‌ಗಳೊಂದಿಗೆ ಐದನೇ ಸ್ಥಾನಕ್ಕೇರಿತು.

ಜಿದ್ದಾಜಿದ್ದಿನ ಪೈಪೋಟಿ ನಡೆದ ಪಂದ್ಯದ 32ನೇ ನಿಮಿಷದಲ್ಲಿ ಗೆಲುವಿನ ಗೋಲು ದಾಖಲಾಯಿತು. ಗೋಲು ಪೋಸ್ಟ್‌ ಬಳಿ ತಮಗೆ ಲಭಿಸಿದ ನಿಖರ ಪಾಸ್‌ನಲ್ಲಿ ರಾಯ್‌ ಚೆಂಡನ್ನು ನಿಯಂತ್ರಣಕ್ಕೆ ಪಡೆದುಕೊಂಡರು.

ಎದುರಾಳಿ ಗೋಲ್‌ಕೀಪರ್‌ ಮಾತ್ರ ತಮ್ಮ ಮುಂದಿರುವುದನ್ನು ಅರಿತ ರಾಯ್, ಇತರ ಡಿಫೆಂಡರ್‌ಗಳು ಧಾವಿಸುವ ಮುನ್ನವೇ ಚಾಣಾಕ್ಷ ರೀತಿಯಲ್ಲಿ ಚೆಂಡನ್ನು ಗುರಿ ಸೇರಿಸಿದರು. 42ನೇ ನಿಮಿಷದಲ್ಲಿ ಬಿಎಫ್‌ಸಿಗೆ ಮುನ್ನಡೆ ಹೆಚ್ಚಿಸುವ ಅವಕಾಶ ಲಭಿಸಿತ್ತು. ಆದರೆ ಸಂದೇಶ್‌ ಜಿಂಗಾನ್‌ ಚೆಂಡನ್ನು ಗುರಿ ಸೇರಿಸುವಲ್ಲಿ ವಿಫಲರಾದರು. ಆತಿಥೇಯ ತಂಡ 26ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆಯಬೇಕಿತ್ತು. ಜಾವಿ ಹೆರ್ನಾಂಡಿಜ್‌ ಅವರ ಫ್ರೀಕಿಕ್‌ನಲ್ಲಿ ದೊರೆತ ಚೆಂಡನ್ನು ಜಿಂಗಾನ್‌ ಹೆಡ್‌ ಮಾಡಿದರೂ ಕ್ರಾಸ್‌ಬಾರ್‌ಗೆ ಬಡಿದು ವಾಪಸಾಯಿತು.

ಮತ್ತೊಂದೆಡೆ ಎದುರಾಳಿ ತಂಡ ಗೋಲು ಗಳಿಸಲು ಮೇಲಿಂದ ಮೇಲೆ ಪ್ರಯತ್ನ ನಡೆಸಿತಾದರೂ, ಯಶಸ್ಸು ಲಭಿಸಲಿಲ್ಲ. ಬ್ಲಾಸ್ಟರ್ಸ್‌ ತಂಡದ ಸ್ಟಾರ್ ಸ್ಟ್ರೈಕರ್‌ಗಳಾದ ಅಡ್ರಿಯಾನ್ ಲುನಾ ಮತ್ತು ದಿಮಿತ್ರೊಸ್‌ ದಿಯಾಮಂತಕೊಸ್‌ ಅವರನ್ನು ಬಿಎಫ್‌ಸಿ ರಕ್ಷಣಾ ವಿಭಾಗ ಸಮರ್ಥವಾಗಿ ಕಟ್ಟಿಹಾಕಿತು.

ಹಳದಿಮಯ: ಪಂದ್ಯ ವೀಕ್ಷಿಸಿದ ಪ್ರೇಕ್ಷಕರಲ್ಲಿ ಬ್ಲಾಸ್ಟರ್ಸ್ ಬೆಂಬಲಿಗರೇ ಹೆಚ್ಚಿನ‌ ಸಂಖ್ಯೆಯಲ್ಲಿದ್ದರು. ತಮ್ಮ ತಂಡದ ಹಳದಿ ಜರ್ಸಿ ತೊಟ್ಟು ಬಂದಿದ್ದರಿಂದ ಇಡೀ ಕ್ರೀಡಾಂಗಣ ಹಳದಿಮಯವಾಗಿತ್ತು. ಶನಿವಾರ ರಾತ್ರಿಯ ಮಟ್ಟಿಗೆ ಕ್ರೀಡಾಂಗಣ‌ 'ಮಿನಿ ಕೇರಳ'ದಂತೆ ಭಾಸವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT