ಬುರಿರಾಮ್ (ಪಿಟಿಐ): ಮುಖ್ಯ ಕೋಚ್ ಇಗೊರ್ ಸ್ಟಿಮ್ಯಾಚ್ ಅವರ ತರಬೇತಿಯಲ್ಲಿ ಪಳಗಿರುವ ಭಾರತ ಫುಟ್ಬಾಲ್ ತಂಡ ಬುಧವಾರ ಕ್ಯುರಸೊವ್ ತಂಡದ ಸವಾಲು ಎದುರಿಸಲಿದೆ.
ಕಿಂಗ್ಸ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ತನ್ನ ಸಾಮರ್ಥ್ಯ ತೋರಲು ಸುನೀಲ್ ಚೆಟ್ರಿ ಪಡೆ ಸಜ್ಜಾಗಿದೆ.
ಮುಂಬರುವ ಫಿಫಾ ವಿಶ್ವಕಪ್ ಅರ್ಹತಾ ಟೂರ್ನಿಯ ಸಿದ್ಧತೆಗೆ ಈ ಪಂದ್ಯಾವಳಿಯನ್ನು ವೇದಿಕೆಯಾಗಿಸಿಕೊಳ್ಳಲು ಭಾರತ ನಿರ್ಧರಿಸಿದೆ.
ತಂಡದ ನಾಯಕ ಸುನೀಲ್ ಚೆಟ್ರಿ ಅವರು ಭಾರತದ ಪರ ಅತೀ ಹೆಚ್ಚು ಅಂತರ್ರಾಷ್ಟ್ರೀಯ ಪಂದ್ಯಗಳನ್ನು ಆಡಿದ ಆಟಗಾರ ಎನಿಸಿಕೊಳ್ಳಲು ಉತ್ಸುಕರಾಗಿದ್ದಾರೆ.
’ಕಿಂಗ್ಸ್ ಕಪ್ ಹಾಗೂ ಭಾರತಕ್ಕೆ ಮರಳಿದ ನಂತರ ಆಡುವ ಹೀರೋ ಇಂಟರ್ಕಾಂಟಿನೆಂಟಲ್ ಕಪ್ ಟೂರ್ನಿಗಳು ವಿಶ್ವಕಪ್ ಅರ್ಹತಾ ಟೂರ್ನಿಗೆ ಸಿದ್ಧವಾಗಲು ನಮಗೆ ಉತ್ತಮ ವೇದಿಯಾಗಿವೆ.
ಇಂಟರ್ಕಾಂಟಿನೆಂಟಲ್ ಟೂರ್ನಿಯಲ್ಲಿ ಸಿರಿಯಾ, ಕೊರಿಯಾದಂತಹ ಬಲಿಷ್ಠ ತಂಡಗಳನ್ನು ಎದುರಿಸಲಿದ್ದು, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಅನುಕೂಲವಾಗಲಿದೆ’ ಭಾರತ ತಂಡದ ನಾಯಕ ಸುನೀಲ್ ಚೆಟ್ರಿ ಹೇಳಿದರು.
ಸೆಪ್ಟೆಂಬರ್ ತಿಂಗಳಲ್ಲಿ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯಗಳು ಆರಂಭವಾಗಲಿವೆ.