ನವದೆಹಲಿ: ‘ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತೆಯರ ಮೇಲೆ ದಾಳಿ ನಡೆಸಿರುವ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡಿ’ ಎಂದು ಭಾರತದ ಹಿರಿಯ ಫುಟ್ಬಾಲ್ ಆಟಗಾರ ಬೈಚುಂಗ್ ಭುಟಿಯಾ, ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ.
‘ಇಂದೋರ್ನಲ್ಲಿ ಬುಧವಾರ ಕಿಡಿಗೇಡಿಗಳ ಗುಂಪು ನಡೆಸಿದ ಕಲ್ಲು ತೂರಾಟದಲ್ಲಿ ಇಬ್ಬರು ಮಹಿಳಾ ವೈದ್ಯೆಯರು ಗಾಯಗೊಂಡಿದ್ದಾರೆ. ಕೋವಿಡ್–19 ವಿರುದ್ಧ ಹೋರಾಡುತ್ತಿರುವ ಆರೋಗ್ಯ ಸೈನಿಕರ ಮೇಲಿನ ಈ ದಾಳಿ ತಲೆತಗ್ಗಿಸುವಂತಹದ್ದು. ಕಿಡಿಗೇಡಿಗಳನ್ನು ಹಿಡಿದು ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಪ್ರಧಾನ ಮಂತ್ರಿಗಳನ್ನು ಕೇಳಿಕೊಳ್ಳುತ್ತೇನೆ’ ಎಂದು ಭುಟಿಯಾ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
‘ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಿದರೆ ಕೊರೊನಾ ಉಪಟಳವನ್ನು ಬೇಗನೆ ನಿಯಂತ್ರಿಸಬಹುದು. ಆದರೆ ಸಿಕ್ಕಿಂ ರಾಜ್ಯದಲ್ಲಿ ಅಗತ್ಯ ಪರೀಕ್ಷಾ ಕಿಟ್ಗಳ ಕೊರತೆ ಇದೆ. ಇದರಿಂದ ಕೊರೊನಾ ಹತ್ತಿಕ್ಕಲು ಹಿನ್ನಡೆ ಉಂಟಾಗುತ್ತಿದೆ’ ಎಂದೂ ಹೇಳಿದ್ದಾರೆ.