ಬೆಂಗಳೂರು: ಎಫ್ಸಿ ಬೆಂಗಳೂರು ಯುನೈಟೆಡ್ ತಂಡದ ಹಾರ್ದಿಕ್ ಭಟ್ ಅವರು ಶುಕ್ರವಾರ ತಮ್ಮ ತಂಡದ ಗೆಲುವಿಗೆ ಅಡ್ಡಿಯಾದರು!
ಅವರು ಮಾಡಿದ ಎಡವಟ್ಟಿನಿಂದಾಗಿ ಎಫ್ಸಿ ಬೆಂಗಳೂರು ತಂಡ ಜಾರ್ಜ್ ಹೂವರ್ ಕಪ್ ಮತ್ತು ಜಿ.ಎಂ.ಎಚ್.ಬಾಷಾ ಕಪ್ಗಾಗಿ ನಡೆಯುತ್ತಿರುವ ಸೂಪರ್ ಡಿವಿಷನ್ ಲೀಗ್ ಫುಟ್ಬಾಲ್ ಚಾಂಪಿಯನ್ಷಿಪ್ನ ಪಂದ್ಯದಲ್ಲಿ ಗೆಲುವಿನ ಅವಕಾಶ ಕಳೆದುಕೊಂಡಿತು.
ಅಶೋಕನಗರದಲ್ಲಿರುವ ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ಬೆಂಗಳೂರು ಯುನೈಟೆಡ್ ಮತ್ತು ಸೌತ್ ಯುನೈಟೆಡ್ ಎಫ್ಸಿ ನಡುವಣ ಪಂದ್ಯ 1–1 ಗೋಲುಗಳಿಂದ ಸಮಬಲವಾಯಿತು.
ಮೊದಲಾರ್ಧದಲ್ಲಿ ಎರಡು ತಂಡಗಳೂ ಸಮಬಲದಿಂದ ಸೆಣಸಿದವು. ದ್ವಿತೀಯಾರ್ಧದ ಆರಂಭದಲ್ಲಿ (51ನೇ ನಿಮಿಷ) ಹಾರ್ದಿಕ್ ಅವರು ತಮ್ಮದೇ ಗೋಲುಪೆಟ್ಟಿಗೆಯಲ್ಲಿ ಚೆಂಡನ್ನು ಒದ್ದರು. ಹೀಗಾಗಿ ಸೌತ್ ಯುನೈಟೆಡ್ ಖಾತೆಗೆ ‘ಉಡುಗೊರೆ’ ಗೋಲು ಸೇರ್ಪಡೆಯಾಯಿತು.
59ನೇ ನಿಮಿಷದಲ್ಲಿ ಗೋಲು ಬಾರಿಸಿದ ಅಮೇಯ್ ಭಟ್ಕಳ ಅವರು ಬೆಂಗಳೂರು ಯುನೈಟೆಡ್ ತಂಡ ಸಮಬಲ ಸಾಧಿಸಲು ನೆರವಾದರು. ನಂತರ ಎರಡು ತಂಡಗಳೂ ಜಿದ್ದಾಜಿದ್ದಿನಿಂದ ಸೆಣಸಿದವು. ಹೀಗಿದ್ದರೂ ಯಾರಿಗೂ ಗೆಲುವಿನ ಗೋಲು ಬಾರಿಸಲು ಆಗಲಿಲ್ಲ.