ಬೆಂಗಳೂರು: ಭಾರತದ ಉದಯನ್ ಮಾನೆ ಮತ್ತು ರಾಹಿಲ್ ಗಂಗ್ಜೀ ಅವರು ಮಂಗಳವಾರದಿಂದ ಆರಂಭವಾಗುವ ಬೆಂಗಳೂರು ಓಪನ್ ಗಾಲ್ಫ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ.
₹ 40 ಲಕ್ಷ ಬಹುಮಾನ ಮೊತ್ತದ ಈ ಚಾಂಪಿಯನ್ಷಿಪ್, ಕರ್ನಾಟಕ ಗಾಲ್ಫ್ ಸಂಸ್ಥೆಯ (ಕೆಜಿಎ) ಅಂಗಳದಲ್ಲಿ ನಡೆಯಲಿದೆ.
‘ನಾಲ್ಕು ದಿನಗಳ ಕಾಲ ಜರುಗುವ ಚಾಂಪಿಯನ್ಷಿಪ್ನಲ್ಲಿ ಹನಿ ಬೈಸೋಯಾ, ಕರಣ್ದೀಪ್ ಕೊಚ್ಚಾರ್ ಸೇರಿದಂತೆ ಒಟ್ಟು 121 ಗಾಲ್ಫರ್ಗಳು ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ಮೂರು ಮಂದಿ ಅಮೆಚೂರ್ ಗಾಲ್ಫರ್ಗಳಿದ್ದಾರೆ. ಬೆಂಗಳೂರಿನ ಎಂ.ಧರ್ಮ, ಸೈಯದ್ ಶಕೀಬ್ ಅಹಮದ್ ಮತ್ತು ಸಿ.ಮುನಿಯಪ್ಪ ಅವರೂ ಕಣದಲ್ಲಿದ್ದಾರೆ’ ಎಂದು ಕೆಜಿಎ ಅಧ್ಯಕ್ಷ ವಿನೋದ್ ಚಿಣ್ಣಪ್ಪ ಅವರು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಶ್ರೀಲಂಕಾದ ಗಾಲ್ಫರ್, ಹಾಲಿ ಚಾಂಪಿಯನ್ ಅನುರಾ ರೋಹನಾ, ಮಿಥುನ್ ಪೆರೇರಾ, ಎನ್.ತಂಗರಾಜ್ ಮತ್ತು ಕೆ.ಪ್ರಭಾಕರನ್, ಬಾಂಗ್ಲಾದೇಶದ ಮೊಹಮ್ಮದ್ ಜಮಾಲ್ ಹುಸೇನ್ ಹಾಗೂ ಆಸ್ಟ್ರೇಲಿಯಾದ ಕುನಾಲ್ ಭಾಸಿನ್ ಅವರೂ ಅಭಿಮಾನಿಗಳ ಆಕರ್ಷಣೆಯಾಗಿದ್ದಾರೆ’ ಎಂದು ಅವರು ಹೇಳಿದರು.