ನವದೆಹಲಿ: ಒಲಿಂಪಿಕ್ಸ್ಗೆ ಅರ್ಹತೆ ಗಳಿಸಿರುವ ಬಾಕ್ಸರ್ಗಳ ರಾಷ್ಟ್ರೀಯ ತರಬೇತಿ ಶಿಬಿರವನ್ನು ಮುಂದಿನ ತಿಂಗಳಲ್ಲಿ ಆರಂಭಿಸಲು ಭಾರತ ಬಾಕ್ಸಿಂಗ್ ಫೆಡರೇಷನ್ ನಿರ್ಧರಿಸಿದೆ. ಪಟಿಯಾಲದಲ್ಲಿ ಶಿಬಿರ ಆಯೋಜಿಸಲು ತೀರ್ಮಾನಿಸಲಾಗಿದ್ದು ಸಂಬಂಧಪಟ್ಟವರ ಅನುಮತಿ ಲಭಿಸಿದ ನಂತರ ದಿನಾಂಕ ನಿಗದಿಪಡಿಸಲಾಗುವುದು ಎಂದು ಫೆಡರೇಷನ್ನ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಜೂನ್ 10ರಂದು ಶಿಬಿರ ಆರಂಭಿಸಲು ಫೆಡರೇಷನ್ ನಿರ್ಧರಿಸಿತ್ತು. ಆದರೆ ಅದಕ್ಕೆ ಭಾರತ ಕ್ರೀಡಾ ಪ್ರಾಧಿಕಾರ ಮತ್ತು ರಾಜ್ಯ ಸರ್ಕಾರದ ಅನುಮತಿ ಲಭಿಸಿರಲಿಲ್ಲ. ಈ ಬಾರಿ ಅನುಮತಿ ಲಭಿಸುವ ವಿಶ್ವಾಸವಿದೆ. ಜುಲೈ ಒಂದರಂದು ಬಾಕ್ಸರ್ಗಳು ಪಟಿಯಾಲಕ್ಕೆ ಬಂದು ಸೇರಲಿದ್ದು ಪರೀಕ್ಷೆ, ಪ್ರತ್ಯೇಕವಾಸ ಇತ್ಯಾದಿಗಳು ನಡೆಯಲಿವೆ. ಶಿಬಿರಕ್ಕೆ ಸಂಬಂಧಿಸಿದ ಪತ್ರ ವ್ಯವಹಾರಗಳು ಮುಗಿದಿದ್ದು ಬಾಕ್ಸರ್ಗಳ ಪ್ರಯಾಣಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಲಾಗುತ್ತಿದೆ’ ಎಂದು ಪದಾಧಿಕಾರಿ ತಿಳಿಸಿದರು.
ಅಮಿತ್ ಪಂಗಲ್ (52 ಕೆಜಿ), ಮನೀಶ್ ಕೌಶಿಕ್ (63 ಕೆಜಿ), ವಿಕಾಸ್ ಕೃಷ್ಣ (69 ಕೆಜಿ), ಆಶಿಶ್ ಕುಮಾರ್ (75 ಕೆಜಿ), ಸತೀಶ್ ಕುಮರ್ (+91 ಕೆಜಿ), ಎಂ.ಸಿ.ಮೇರಿ ಕೋಮ್ (51 ಕೆಜಿ), ಸಿಮ್ರನ್ಜೀತ್ ಕೌರ್ (60 ಕೆಜಿ), ಲವ್ಲೀನಾ ಬೋರ್ಗೇನ್ (69 ಕೆಜಿ) ಮತ್ತು ಪೂಜಾ ರಾಣಿ (75 ಕೆಜಿ) ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಗಳಿಸಿದ್ದಾರೆ.
2017ರಿಂದ ಭಾರತ ಪುರುಷ ಮತ್ತು ಮಹಿಳೆಯರ ತಂಡಗಳ ತರಬೇತಿ ಶಿಬಿರ ನವದೆಹಲಿಯಲ್ಲಿ ನಡೆಯುತ್ತಿತ್ತು. ಈಗ ಪಟಿಯಾಲಕ್ಕೆ ಸ್ಥಳಾಂತರಿಸಲಾಗಿದೆ. ಆದರೆ ಈ ಬಾರಿಯೂ ಶಿಬಿರ ಜಂಟಿಯಾಗಿಯೇ ನಡೆಯಲಿದೆ.
ಮಾರ್ಚ್ ಮಧ್ಯದಲ್ಲಿ ಕ್ರೀಡಾ ಚಟುವಟಿಕೆ ಸ್ಥಗಿತಗೊಂಡ ನಂತರ ಬಾಕ್ಸರ್ಗಳು ಮನೆಗಳಲ್ಲೇ ಅಭ್ಯಾಸ ಮಾಡುತ್ತಿದ್ದಾರೆ. ಆದರೆ ಯಾರೂ ಎದುರಾಳಿಯನ್ನು ಇರಿಸಿಕೊಂಡು ಅಭ್ಯಾಸ ಮಾಡಬಾರದು ಎಂದೂ ರಿಂಗ್ಗೆ ಇಳಿಯಬಾರದು ಎಂದೂ ಭಾರತ ಕ್ರೀಡಾ ಪ್ರಾಧಿಕಾರ ಸೂಚಿಸಿತ್ತು. ಅವರಿಗೆ ವೈದ್ಯಕೀಯ ವಿಮೆ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಲಾಗಿತ್ತು.
ಅಕ್ಟೋಬರ್–ನವೆಂಬರ್ನಲ್ಲಿ ಸ್ಪರ್ಧೆಗಳು?
ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ರಾಷ್ಟ್ರೀಯ ಸ್ಪರ್ಧೆಗಳನ್ನು ಆಯೋಜಿಸಲು ಸಾಧ್ಯವಾಗುವ ವಾತಾವರಣ ನಿರ್ಮಾಣವಾಗಲಿದೆ ಎಂಬುದು ಫೆಡರೇಷನ್ ಭರವಸೆ. ಏಷ್ಯನ್ ಚಾಂಪಿಯನ್ಷಿಪ್ ಆಯೋಜಿಸುವ ಅವಕಾಶ ಭಾರತ ಫೆಡರೇಷನ್ಗೆ ಲಭಿಸಲಿದ್ದು ಅದನ್ನು ಡಿಸೆಂಬರ್ನಲ್ಲಿ ನಡೆಸಲು ನಿರ್ಧರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.