ದಾವಣಗೆರೆ: ಒಡಿಶಾದ ಭುವನೇಶ್ವರದಲ್ಲಿ ಇದೇ 24ರಿಂದ 26ರವರೆಗೆ ನಡೆಯಲಿರುವ ರಾಷ್ಟ್ರಮಟ್ಟದ ಪ್ಯಾರಾ ಬ್ಯಾಡ್ಮಿಂಟನ್ನಲ್ಲಿ ಭಾಗವಹಿಸಲು ರಾಜ್ಯದಿಂದ 15 ಮಂದಿ ಆಯ್ಕೆಯಾಗಿದ್ದಾರೆ. ಅದರಲ್ಲಿ ಏಳು ಮಂದಿ ದಾವಣಗೆರೆಯವರು ಇದ್ದಾರೆ.
ಅಂಗವಿಕಲತೆಯ ಪ್ರಮಾಣಕ್ಕೆ ಅನುಗುಣವಾಗಿ 6 ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತದೆ. ಅದರಲ್ಲಿ ಡಬ್ಲ್ಯುಎಚ್1 ಮತ್ತು ಡಬ್ಲ್ಯುಎಚ್2 ವಿಭಾಗಗಳಲ್ಲಿ ಈ ಏಳು ಮಂದಿ ಸ್ಪರ್ಧಿಸುತ್ತಿದ್ದಾರೆ ಎಂದು ದಾವಣಗೆರೆ ಜಿಲ್ಲಾ ಪ್ಯಾರಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಡಾ.ಎ.ಎಂ. ಶಿವಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಒಳಾಂಗಣ ಕ್ರೀಡಾಂಗಣದಲ್ಲಿ ಅವಕಾಶ ಕೂಡ ಇರಲಿಲ್ಲ. ಹೋರಾಟ ಮಾಡಿ ಸರ್ಕಾರಕ್ಕೆ ಪತ್ರ ಬರೆದು ಅವಕಾಶ ಗಿಟ್ಟಿಸಿಕೊಳ್ಳಲಾಗಿದೆ. ಈ ಏಳು ಮಂದಿ ಸ್ವಸಾಮರ್ಥ್ಯದಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅವರಿಗೆ ಕೋಚ್ ಕೂಡ ಇಲ್ಲ. ಮುಂದೆ ಕೋಚ್ ವ್ಯವಸ್ಥೆ ಮಾಡುತ್ತೇವೆ’ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಜೆ.ಬಿ. ಉಮೇಶ್, ಉಪಾಧ್ಯಕ್ಷರಾದ ಇ.ದೇವೇಂದ್ರಪ್ಪ, ಬಿ.ಎಂ. ಕರಿಬಸಪ್ಪ, ನಿರ್ದೇಶಕ ಎನ್.ಎಚ್. ಬಸವರಾಜ್, ಕಲ್ಪೇಶ್ ಇದ್ದರು.