ಬೆಂಗಳೂರು: ಡಿವೈಇಎಸ್ ಬೆಂಗಳೂರು ‘ಎ’ ತಂಡ ಶುಕ್ರವಾರ ಶಾಂತಿನಗರದಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅರೇನಾದಲ್ಲಿ ಗೋಲುಗಳ ಮಳೆ ಸುರಿಸಿತು.
ರಾಜ್ಯಮಟ್ಟದ ಜೂನಿಯರ್ ಪುರುಷರ ಹಾಕಿ ಟೂರ್ನಿಯ ಹಾಕಿ ಹಾಸನ ವಿರುದ್ಧದ ಪಂದ್ಯದಲ್ಲಿ ಡಿವೈಇಎಸ್ ತಂಡದ ಮೂರು ಮಂದಿ ‘ಹ್ಯಾಟ್ರಿಕ್’ ಸಾಧನೆ ಮಾಡಿದರು.
ಈ ಹಣಾಹಣಿಯಲ್ಲಿ ಡಿವೈಇಎಸ್ ತಂಡ 15–0 ಗೋಲುಗಳಿಂದ ಜಯಭೇರಿ ಮೊಳಗಿಸಿತು.
ನಿತಿನ್ 7, 18, 26 ಮತ್ತು 52ನೇ ನಿಮಿಷಗಳಲ್ಲಿ ಕೈಚಳಕ ತೋರಿದರು. ಸುಕಲ್ಯನ್ ಮಂಡಲ್ 10, 38 ಮತ್ತು 47ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿ ಸಂಭ್ರಮಿಸಿದರು.
ಕೆ.ಎಂ.ಯಶವಂತ್ ಕೂಡ ಮೋಡಿ ಮಾಡಿದರು. ಅವರು 42, 44, 48 ಹಾಗೂ 55ನೇ ನಿಮಿಷಗಳಲ್ಲಿ ಗೋಲು ಬಾರಿಸಿದರು. ಪ್ರಜ್ವಲ್ (12 ಮತ್ತು 49) ಹಾಗೂ ಪ್ರಣಾಮ್ ಗೌಡ (17 ಮತ್ತು 56) ಅವರು ತಲಾ ಎರಡು ಗೋಲು ದಾಖಲಿಸಿ ಅಭಿಮಾನಿಗಳಿಂದ ಚಪ್ಪಾಳೆ ಗಿಟ್ಟಿಸಿದರು.
ದಿನದ ಇನ್ನೊಂದು ಪಂದ್ಯದಲ್ಲಿ ಡಿವೈಇಎಸ್ ಬೆಂಗಳೂರು ‘ಬಿ’ ತಂಡ 3–2 ಗೋಲುಗಳಿಂದ ಡಿವೈಇಎಸ್ ಕೂಡಿಗೆ ತಂಡವನ್ನು ಪರಾಭವಗೊಳಿಸಿತು.
ವಿಜಯೀ ತಂಡದ ಹುಮೈಜ್ (4ನೇ ನಿಮಿಷ), ವಿಶ್ವಾಸ್ (32) ಮತ್ತು ಗೌತಮ್ (48) ಅವರು ಗೋಲು ಹೊಡೆದರು.
ಕೂಡಿಗೆ ತಂಡದ ಮಜ್ಜಿ ಗಣೇಶ್ (9 ಮತ್ತು 41ನೇ ನಿ.) ಏಕಾಂಗಿ ಹೋರಾಟ ನಡೆಸಿದರು.