ವಿಜಯಪುರ: 12ನೇ ರಾಜ್ಯ ಮಟ್ಟದ ರೋಡ್ ಸೈಕ್ಲಿಂಗ್ ಚಾಂಪಿಯನ್ಶಿಫ್ ಅಕ್ಟೋಬರ್ 20 ಮತ್ತು 21ರಂದು ವಿಜಯಪುರ ನಗರದಲ್ಲಿ ನಡೆಯಲಿದೆ ಎಂದು ಕರ್ನಾಟಕ ಅಮೆಚರ್ಸೈಕ್ಲಿಂಗ್ ಅಸೋಸಿಯೇಶನ್ ಅಧ್ಯಕ್ಷ ರಾಜು ಎಸ್.ಬಿರಾದಾರ ತಿಳಿಸಿದರು.
ಚಾಂಪಿಯನ್ ಶಿಫ್ನಲ್ಲಿ 14, 16 ಮತ್ತು 18 ವರ್ಷದೊಳಗಿನ ಬಾಲಕ–ಬಾಲಕಿಯರ ಹಾಗೂ ಪುರುಷ–ಮಹಿಳೆಯರಿಗೆ ಪ್ರತ್ಯೇಕ ವಿಭಾಗದಲ್ಲಿ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳ 250 ಸೈಕ್ಲಿಸ್ಟ್ಗಳು ಹಾಗೂ 50 ಜನ ಕ್ರೀಡಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಬೆಳಿಗ್ಗೆ 6ರಿಂದ ಸಂಜೆ 5ರ ವರೆಗೆ ನಗರದ ಸೋಲಾಪುರ ರಸ್ತೆಯ ಬೈಪಾಸ್ನಿಂದ ಬರಟಗಿ ರಸ್ತೆಯಲ್ಲಿ ರೋಡ್ ಸೈಕ್ಲಿಂಗ್ ಚಾಂಪಿಯನ್ ಶಿಫ್ ನಡೆಯಲಿದೆ ಎಂದರು.
ಈ ಚಾಂಪಿಯನ್ಶಿಫ್ನಲ್ಲಿ ಪಾಲ್ಗೊಂಡ ಅರ್ಹ 40 ಸೈಕ್ಲಿಸ್ಟ್ಗಳನ್ನು ಆಯ್ಕೆ ಮಾಡಿ, ನವೆಂಬರ್ 25ರಿಂದ 28ರ ವರೆಗೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆಯುವ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್ಶಿಫ್ಗೆ ಕಳುಹಿಸಲಾಗುವುದು ಎಂದು ತಿಳಿಸಿದರು.
ರಾಜ್ಯ ಮಟ್ಟದ ರೋಡ್ ಸೈಕ್ಲಿಂಗ್ ಚಾಂಪಿಯನ್ಶಿಫ್ ಸಂಘಟನೆಗೆ ₹ 7 ಲಕ್ಷ ಖರ್ಚಾಗುತ್ತಿದೆ. ಸರ್ಕಾರದಿಂದ ಕೇವಲ ₹ 40 ಸಾವಿರ ಅನುದಾನ ಲಭಿಸಲಿದೆ. ಉಳಿದ ಹಣಕ್ಕೆ ದಾನಿಗಳನ್ನು ಆಶ್ರಯಿಸಬೇಕಾಗಿದೆ ಎಂದರು.
ಝೀರೊ ಟ್ರಾಫಿಕ್ಗೆ ಬೇಡಿಕೆ: ಜಿಲ್ಲೆಯಲ್ಲಿ ರೋಡ್ ಸೈಕ್ಲಿಂಗ್ ತರಬೇತಿಗೆ ಅನುಕೂಲವಾಗುವಂತೆ ಯಾವುದಾದರು ಒಂದು ರಸ್ತೆಯಲ್ಲಿ ಪ್ರತಿ ದಿನ ಬೆಳಿಗ್ಗೆ 6ರಿಂದ 9ರ ವರೆಗೆ ಝೀರೊ ಟ್ರಾಫಿಕ್ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ವಿಜಯಪುರ ಆಮೆಚೂರ್ ಸೈಕ್ಲಿಂಗ್ ಅಸೋಸಿಯೇಶನ್ ಗೌರವ ಅಧ್ಯಕ್ಷ ಪ್ರದೀಪ್ ರಾಠೋಡ, ಕಾರ್ಯದರ್ಶಿ ಸಂಜು ಪಡತಾರೆ, ಸಂಘಟನಾ ಕಾರ್ಯದರ್ಶಿ ಶ್ರೀಕಾಂತ ಮಠ, ಖಜಾಂಚಿ ಸಂತೋಷ ಕತಕನಹಳ್ಳಿ, ಜಂಟಿ ಕಾರ್ಯದರ್ಶಿ ಮಂಜುನಾಥ ರಾಠೋಡ ಪತ್ರಿಕಾಗೋಷ್ಠಿಯಲ್ಲಿ ಇದ್ದರು.