ಟೋಕಿಯೊ: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಎದುರಾಗಿರುವ ಸೋಲಿನಿಂದ ತೀವ್ರ ನೊಂದಿರುವ ಭಾರತದ ಅಗ್ರ ಬಿಲ್ಲುಗಾರಅತನು ದಾಸ್ ಕ್ಷಮೆಯಾಚಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅತನು, 'ನನ್ನನ್ನು ಕ್ಷಮಿಸಿ ಭಾರತ' ಎಂದು ಕೈ ಮುಗಿಯುವ ಇಮೋಜಿ ಹಾಕಿದ್ದಾರೆ. 'ಈ ಬಾರಿ ಒಲಿಂಪಿಕ್ಸ್ನಲ್ಲಿ ಕೀರ್ತಿ ತರಲು ಸಾಧ್ಯವಾಗಲಿಲ್ಲ' ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಭಾರತ ಕ್ರೀಡಾ ಪ್ರಾಧಿಕಾರ, ಭಾರತದ ಆರ್ಚರಿ ಸಂಸ್ಥೆ ಹಾಗೂ ಒಲಿಂಪಿಕ್ ಸಮಿತಿಯಿಂದ ದೊರಕಿರುವ ಅಭೂತಪೂರ್ವ ಬೆಂಬಲವನ್ನು ಸ್ಮರಿಸಿದ್ದಾರೆ.
'ಇಲ್ಲಿಂದ ಮುಂದಕ್ಕೆ ಸಾಗೋಣ. ಇನ್ನೇನು ಹೇಳಲು ಬಯಸುವುದಿಲ್ಲ. ಜಯ್ ಹಿಂದ್' ಎಂದು ಅತನು ದಾಸ್ ಉಲ್ಲೇಖಿಸಿದ್ದಾರೆ.
ಆರ್ಚರಿಯಲ್ಲಿ ಭಾರತದ ಕೊನೆಯ ಭರವಸೆಯಾಗಿದ್ದ ಅತನು ದಾಸ್ ಸೋಲು ಅನುಭವಿಸುದರೊಂದಿಗೆ ದೇಶದ ಬಿಲ್ಲುಗಾರರು ಬರಿಗೈಯಲ್ಲಿ ಮರಳಿದ್ದರು.
ಪುರುಷರ ವೈಯಕ್ತಿಕ ವಿಭಾಗದ ಪ್ರೀ-ಕ್ವಾರ್ಟರ್ಫೈನಲ್ನಲ್ಲಿ ಅತನು ದಾಸ್ ಜಪಾನ್ನ ತಕಹರು ಪುರುಕಾವ ವಿರುದ್ಧ 4-6ರಲ್ಲಿ ಸೋಲು ಅನುಭವಿಸಿದರು.
ಈ ಮೂಲಕ ಸತತ ಎರಡನೇ ಬಾರಿಗೆ ಒಲಿಂಪಿಕ್ಸ್ ಪ್ರೀ-ಕ್ವಾರ್ಟರ್ಫೈನಲ್ನಲ್ಲಿ ಸೋಲು ಎದುರಾಗಿದೆ.
ಅತನು ದಾಸ್ ಅವರ ಪತ್ನಿ ದೀಪಿಕಾ ಕುಮಾರಿ, ಸತತ ಮೂರನೇ ಬಾರಿಯೂ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲಲಾಗದೇ ವಾಪಸ್ ಆಗಿದ್ದಾರೆ. ಮಹಿಳೆಯರ ವೈಯಕ್ತಿಕ ವಿಭಾಗದ ಎಂಟರ ಘಟ್ಟದಲ್ಲಿ ದೀಪಿಕಾ, ದಕ್ಷಿಣ ಕೊರಿಯಾದ ಎನ್ ಸ್ಯಾನ್ ವಿರುದ್ದ 0-6ರ ಅಂತರದಲ್ಲಿ ಪರಾಭವಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.