ಬೆಂಗಳೂರು: ಕರ್ನಾಟಕದ ರಿಷಿ ರೆಡ್ಡಿ ಹಾಗೂ ವಂಶಿತಾ ಪತಂಜ ಅವರು ಕೆಎಸ್ಎಲ್ಟಿಎ–ಎಐಟಿಎ ಪ್ರೊ ಸರ್ಕ್ಯೂಟ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಫೈನಲ್ಗೆ ಕಾಲಿಟ್ಟಿದ್ದಾರೆ.
ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್ಎಲ್ಟಿಎ) ಅಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ನಾಲ್ಕರ ಘಟ್ಟದ ಪಂದ್ಯದಲ್ಲಿ ರಿಷಿ 6-1, 6-2ರಿಂದ ತಮಿಳುನಾಡಿನ ಭೂಪತಿ ಶಕ್ತಿವೇಲು ಎದುರು ಜಯ ಸಾಧಿಸಿದರು.
ಫೈನಲ್ನಲ್ಲಿ ಅವರು ಪಶ್ಚಿಮ ಬಂಗಾಳದ ಇಶಾಕ್ ಇಕ್ಬಾಲ್ ಅವರನ್ನು ಎದುರಿಸಲಿದ್ದಾರೆ. ಇನ್ನೊಂದು ಸೆಮಿಫೈನಲ್ನಲ್ಲಿ ಇಶಾಕ್ 2-6, 6-1, 6-0ರಿಂದ ತಮಿಳುನಾಡಿನ ಓಜಸ್ ತೆಯಿಜೊ ಸವಾಲು ಮೀರಿದರು.
ಮಹಿಳಾ ವಿಭಾಗದ ಸೆಮಿಫೈನಲ್ ಹಣಾಹಣಿಯಲ್ಲಿ ವಂಶಿತಾ 6-4, 6-2ರಿಂದ ಕೇರಳದ ಗಾಯತ್ರಿ ಮೆನನ್ ಅವರನ್ನು ಸೋಲಿಸಿದರು. ಪ್ರಶಸ್ತಿ ಸುತ್ತಿನಲ್ಲಿ ಅವರು ತಮಿಳುನಾಡಿನ ಆವಿಷ್ಕಾ ಗುಪ್ತಾ ಅವರಿಗೆ ಮುಖಾಮುಖಿಯಾಗಲಿದ್ದಾರೆ.