ಬೆಂಗಳೂರು: ಹೈದರಾಬಾದ್ನ ಪ್ರಾಂಜಲ ಯಡ್ಲಪಲ್ಲಿ ಅವರು ಐಟಿಎಫ್ ಮಹಿಳೆಯರ ವಿಶ್ವ ಟೆನಿಸ್ ಟೂರ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.
ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್ಎಲ್ಟಿಎ) ಅಂಗಣದಲ್ಲಿ ಭಾನುವಾರ ಕೊನೆಗೊಂಡ ಚಾಂಪಿಯನ್ಷಿಪ್ನ ಮಹಿಳಾ ಸಿಂಗಲ್ಸ್ ಫೈನಲ್ ಹಣಾಹಣಿಯಲ್ಲಿ ಅವರು ತಮ್ಮದೇ ರಾಜ್ಯದ ಸೌಜನ್ಯ ಬಾವಿಸೆಟ್ಟಿ ಸವಾಲು ಮೀರಿದರು. ಪ್ರಾಂಜಲ 7-5, 6-2ರಿಂದ ಜಯಿಸಿ ವೃತ್ತಿಜೀವನದ ನಾಲ್ಕನೇ ಐಟಿಎಫ್ ಕಿರೀಟ ಧರಿಸಿದರು.
ಮೊದಲ ಸೆಟ್ನಲ್ಲಿ 3–5ರಿಂದ ಹಿನ್ನಡೆ ಅನುಭವಿಸಿದ್ದ ಪ್ರಾಂಜಲ ಬಳಿಕ ಪುಟಿದೆದ್ದು 7–5ರಿಂದ ಸೆಟ್ ತಮ್ಮದಾಗಿಸಿಕೊಂಡರು. ಅದೇ ಲಯದೊಂದಿಗೆ ಮುಂದುವರಿದು ಎರಡನೇ ಸೆಟ್ ಗೆದ್ದು ಪ್ರಶಸ್ತಿ ಒಲಿಸಿಕೊಂಡರು.
ಭುಜದ ನೋವಿನಿಂದ ಬಳಲಿದ್ದ 22 ವರ್ಷದ ಪ್ರಾಂಜಲ, ಸುಮಾರು ಎರಡು ವರ್ಷಗಳ ಕಾಲ ಟೆನಿಸ್ನಿಂದ ದೂರ ಉಳಿದಿದ್ದರು. ಇಲ್ಲಿ ಪ್ರಶಸ್ತಿಯೊಂದಿಗೆ ಅವರು ₹ 1 ಲಕ್ಷ 70 ಸಾವಿರ ನಗದು ತಮ್ಮದಾಗಿಸಿಕೊಂಡರು. ಅಲ್ಲದೆ 10 ವಿಶ್ವ ರ್ಯಾಂಕಿಂಗ್ ಪಾಯಿಂಟ್ಸ್ ಕೂಡ ಗಳಿಸಿದರು.
ಸೌಜನ್ಯ ಆರು ಪಾಯಿಂಟ್ಸ್ ಮತ್ತು ₹ 1 ಲಕ್ಷ 10 ಸಾವಿರ ಜೇಬಿಗಿಳಿಸಿದರು.
ತೀವ್ರ ಪೈಪೋಟಿಯಿಂದ ಕೂಡಿದ್ದ ಫೈನಲ್ನಲ್ಲಿ, ಸೌಜನ್ಯ ಆಕ್ರಮಣದ ಆಟಕ್ಕೆ ಹೆಚ್ಚು ಮಹತ್ವ ನೀಡಿದರು. ಆದರೆ ಅದೇ ಅವರಿಗೆ ಮುಳುವಾಯಿತು. ಶಾಂತಚಿತ್ತ ಆಟದ ಮೂಲಕ ಪ್ರಾಂಜಲ ಪಾಯಿಂಟ್ಸ್ ಹೆಚ್ಚಿಸಿಕೊಂಡರು. ಬ್ಯಾಕ್ಹ್ಯಾಂಡ್ ಹೊಡೆತಗಳಿಗೆ ಒತ್ತು ನೀಡಿದರು.