ಬೆಂಗಳೂರು: ಎದುರಾಳಿಗಳ ಸವಾಲನ್ನು ದಿಟ್ಟವಾಗಿ ಎದುರಿಸಿದ ಕರ್ನಾಟಕದ ಆಟಗಾರರಾದ ವೈಭವ್ ಕೃಷ್ಣ ಶ್ರೀರಾಮ್ ಮತ್ತು ಸುಚಿರ್ ಚೇತನ್ ಶೇಷಾದ್ರಿ ಅವರು ಟೆನಿಸ್ 360 ಅಕಾಡೆಮಿಯಲ್ಲಿ ನಡೆಯುತ್ತಿರುವ ಎಐಟಿಎ ಟ್ಯಾಲೆಂಟ್ ಸೀರಿಸ್ನ 16 ವರ್ಷದೊಳಗಿನವರ ಟೂರ್ನಿಯ ಫೈನಲ್ ಪ್ರವೇಶಿಸಿದರು.
ಗುರುವಾರ ನಡೆದ ಸೆಮಿಫೈನಲ್ನಲ್ಲಿ ಆರನೇ ಶ್ರೇಯಾಂಕದ ವೈಭವ್ ಅಗ್ರ ಶ್ರೇಯಾಂಕದ ಜೇಸನ್ ಮೈಕೆಲ್ ಡೇವಿಡ್ ವಿರುದ್ಧ 6–1, 7–5ರಲ್ಲಿ ಜಯ ಗಳಿಸಿದರು. ನಾಲ್ಕನೇ ಶ್ರೇಯಾಂಕದ ಸುಚಿರ್ ಎರಡನೇ ಶ್ರೇಯಾಂಕದ ಅನೂಪ್ ಕೇಶವಮೂರ್ತಿ ಎದುರು 7–5, 6–1ರಲ್ಲಿ ಗೆಲುವು ಸಾಧಿಸಿದರು.
ಬಾಲಕಿಯರ ವಿಭಾಗದಲ್ಲಿ ದಿಶಾ ಸಂತೋಷ್ ಖಂಡೋಜಿ 6-1, 7-6 (1)ರಲ್ಲಿ ವಾರುಣ್ಯ ಸಿ.ಎನ್ ಎದುರು ಗೆದ್ದು ಫೈನಲ್ ಪ್ರವೇಶಿಸಿದರು. ಮೂರನೇ ಶ್ರೇಯಾಂಕದ ಕಾಜಲ್ ರಾಮಿಶೆಟ್ಟಿ ಅಗ್ರ ಶ್ರೇಯಾಂಕದ ಗಗನಾ ಮೋಹನ್ ಎದುರು 1-6, 6-4, 6-3ರಲ್ಲಿ ಜಯ ಸಾಧಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದರು.
ಬಾಲಕರ ಡಬಲ್ಸ್ ವಿಭಾಗದ ಪ್ರಶಸ್ತಿ ಅನೂಪ್ ಕೇಶವಮೂರ್ತಿ ಮತ್ತು ಜೇಸನ್ ಜೋಡಿಯ ಪಾಲಾಯಿತು. ಫೈನಲ್ನಲ್ಲಿ ಅವರು ಪವನ್ ಗಣೇಶ್ ಮತ್ತು ಹರೀಶ್ ಕುಮಾರ್ ವಿರುದ್ಧ 7-6 (2), 6-2ರಲ್ಲಿ ಜಯ ಗಳಿಸಿದರು.