ಧಾರವಾಡ: ಕಾರೊಂದು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ಕ್ರೀಡಾಪಟು ಗೌತಮ್ ಭಟ್ (21) ಶನಿವಾರ ಬೆಳಿಗ್ಗೆ ಮೃತ ಪಟ್ಟಿದ್ದಾರೆ.
ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೊಸೂರು ಗ್ರಾಮದ ಗೌತಮ್ ಅವರು ಪ್ರಯಾಣಿಸುತ್ತಿದ್ದ ಕಾರು ಶುಕ್ರವಾರ ರಾತ್ರಿ ಇಲ್ಲಿಯ ಕಲ್ಯಾಣ ನಗರದ ಬಳಿಯ ಮರಕ್ಕೆ ಡಿಕ್ಕಿ ಹೊಡೆಯಿತು. ಇದರಿಂದಾಗಿ ಗಾಯಗೊಂಡಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಗೌತಮ್ ಸಾವನ್ನಪ್ಪಿದರು.
ಭರವಸೆಯ ಆಟಗಾರ (ಮೂಡಬಿದರೆ ವರದಿ): ಗೌತಮ್ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಈಚೆಗಷ್ಟೇ ವಾಣಿಜ್ಯ ಪದವಿ ಶಿಕ್ಷಣ ಪೂರೈಸಿದ್ದರು. ಇವರು ಕಳೆದ ಮೂರು ವರ್ಷಗಳ ಕಾಲ ಸತತವಾಗಿ ಮಂಗಳೂರು ವಿಶ್ವವಿದ್ಯಾಲಯದ ಷಟಲ್ಬ್ಯಾಡ್ಮಿಂಟನ್ ತಂಡದಲ್ಲಿದ್ದು ದಕ್ಷಿಣ ವಲಯ ಅಂತರ ವಾರ್ಸಿಟಿ ಟೂರ್ನಿಗಳಲ್ಲಿ ಆಡಿದ್ದರು. ಇವರು ಹಿಂದೆ ಜೈಪುರದಲ್ಲಿ ನಡೆದಿದ್ದ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿದ್ದರು.
ಸಂತಾಪ: ಅರ್ಪಣಾ ಮನೋಭಾವದ ಪರಿಶ್ರಮಿ ಮತ್ತು ಅತ್ಯುತ್ತಮ ಬ್ಯಾಡ್ಮಿಂಟನ್ ಆಟಗಾರನಾಗಿದ್ದ ಗೌತಮ್ ಭಟ್ ದುರ್ಮರಣ ರಾಜ್ಯ ಕ್ರೀಡಾರಂಗಕ್ಕೆ ತುಂಬಲಾರದ ನಷ್ಟ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ.ಎಂ.ಮೋಹನ್ ಆಳ್ವಾ ಸಂತಾಪ ವ್ಯಕ್ತ ಪಡಿಸಿದ್ದಾರೆ.