ನೆಲಮಂಗಲ: ಬಸವಣ್ಣ ದೇವರ ಮಠದಲ್ಲಿ ಬಸವೇಶ್ವರರ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ರಥೋತ್ಸವಕ್ಕೆ ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು. ರಥವನ್ನು ಎಳೆಯುತ್ತಿದ್ದಂತೆ ಭಕ್ತರು ಹೂಗಳನ್ನು ಚೆಲ್ಲಿ ಭಕ್ತಿ ಮೆರೆದರು. ಬಂಡೆಮಠದ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.
ಚಂಡೆಮದ್ದಳೆ, ಕಂಸಾಳೆ, ನಗಾರಿ, ನಂದಿಧ್ವಜದ ಜನಪದ ಕಲಾ ಪ್ರಕಾರಗಳೊಂದಿಗೆ, ಭಕ್ತರ ಜಯಘೋಷಗಳೊಂದಿಗೆ ರಥೋತ್ಸವ ಸಾಗಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಅಶ್ವಾರೂಢ ಬಸವೇಶ್ವರರ ದೊಡ್ಡ ಕಂಚಿನ ಪ್ರತಿಮೆಯನ್ನು ಹಾಗೂ ಸುತ್ತಮುತ್ತಲ ಹಳ್ಳಿಗಳಿಂದ ತಂದಿದ್ದ ಉತ್ಸವ ಬಸವಣ್ಣರನ್ನು ಜನಪದ ಕಲಾ ತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಜೆ ಮೆರವಣಿಗೆ ಮಾಡಲಾಯಿತು.
ಭಕ್ತರು ಬಸವಣ್ಣ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಿದರು. ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಬಸವಣ್ಣರ ಭಾವಚಿತ್ರದ ಮೆರವಣಿಗೆ ಸಂಜೆ ನಡೆಯಿತು.