ಬೆಂಗಳೂರು: ಕೊರೊನಾ ಸೋಂಕು ಹೆಚ್ಚುತ್ತಿರುವ ಸಮಯದಲ್ಲೂ ಸೇವೆಯಲ್ಲಿ ತೊಡಗಿರುವ ಪೌರಕಾರ್ಮಿಕರಿಗೆ ಪಾಲಿಕೆ ಅಗತ್ಯ ಸೌಕರ್ಯ ಕಲ್ಪಿಸಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಬಿಬಿಎಂಪಿ ಪೌರಕಾರ್ಮಿಕರ ಸಂಘವು ಮಂಗಳವಾರದಿಂದ ಅನಿರ್ದಿಷ್ಟ ಹೋರಾಟ ಆರಂಭಿಸಿದೆ.
ಈಗಾಗಲೇ ಐವರು ಪೌರಕಾರ್ಮಿಕರು ಕೊರೊನಾ ಸೋಂಕಿನಿಂದ ಜೀವ ಕಳೆದುಕೊಂಡಿದ್ದಾರೆ. 50ಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢವಾಗಿದೆ. ಇಂತಹ ವಾತಾವರಣ ಇದ್ದರೂ ಪೌರಕಾರ್ಮಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದೆ ಪಾಲಿಕೆ ನಿರ್ಲಕ್ಷಿಸಿದೆ ಎಂದು ದೂರಿದೆ.
ಪೌರಕಾರ್ಮಿಕರಿಗೆ ಕಡ್ಡಾಯವಾಗಿ ಕೊರೊನಾ ತಪಾಸಣೆ ನಡೆಸಬೇಕು. ಸುರಕ್ಷತೆಗೆ ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್ ವಿತರಿಸಬೇಕು. ಕಸದ ಗಾಡಿಗಳಿಗೆ ಸೋಂಕುನಿವಾರಕ ಸಿಂಪಡಣೆ ಮಾಡಬೇಕು. ನಗರದ ಪ್ರತಿ ವಲಯದಲ್ಲಿ ಸ್ನಾನಗೃಹ, ಶೌಚಾಲಯ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದೆ.
ಥರ್ಮಲ್ ಸ್ಕ್ಯಾನಿಂಗ್, ಆರೋಗ್ಯ ಶಿಬಿರಗಳು, ಪೌರಕಾರ್ಮಿಕರ ನೆರವಿಗೆ ಸಹಾಯವಾಣಿ ಆರಂಭಿಸಬೇಕು. ಬಾಕಿ ವೇತನ, ಸಾರಿಗೆ ಭತ್ಯೆ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದೆ.
ಪ್ರತಿದಿನ ಬೆಳಿಗ್ಗೆ 6.30 ಹಾಗೂ 11.30ಕ್ಕೆ ಎಲ್ಲ ವಲಯಗಳಲ್ಲಿ ಪೌರಕಾರ್ಮಿಕರು ಪ್ರತಿಭಟನೆಯಲ್ಲಿ ಕೂರಲಿದ್ದಾರೆ. ಬಳಿಕ ಕಪ್ಪು ಬಟ್ಟೆ ಕಟ್ಟಿಕೊಂಡು ಕೆಲಸ ಮುಂದುವರಿಸಲಿದ್ದಾರೆ.