ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸನಾತನ’ ಸಂಪಾದಕನಿಂದ ಹಂತಕರಿಗೆ ಹಣ!

ಪಾಸ್‌ಬುಕ್‌ಗಳಲ್ಲಿ ಸಿಕ್ಕ ಸುಳಿವು l ಪುಸ್ತಕ ಓದಿ ಪ್ರಭಾವಿತರಾಗಿದ್ದ ಆರೋಪಿಗಳು
Last Updated 25 ನವೆಂಬರ್ 2018, 2:48 IST
ಅಕ್ಷರ ಗಾತ್ರ

ಬೆಂಗಳೂರು: ಸನಾತನ ಸಂಸ್ಥೆಯ ಮುಖವಾಣಿಯಾದ ‘ಸನಾತನ ಪ್ರಭಾತ್’ ಪತ್ರಿಕೆಯ ಮಾಜಿ ಸಂಪಾದಕ ಶಶಿಕಾಂತ್ ರಾಣೆಯೇ ಪತ್ರಕರ್ತೆ ಗೌರಿ ಲಂಕೇಶ್ ಹಂತಕರ ಜಾಲಕ್ಕೆ ಹಣಕಾಸಿನ ನೆರವು ನೀಡುತ್ತಿದ್ದ ಎಂಬ ಸಂಗತಿ ಎಸ್‌ಐಟಿ ತನಿಖೆಯಿಂದ ಬಯಲಾಗಿದೆ.

‘ಕ್ಷಾತ್ರಧರ್ಮ ಸಾಧನ’ ಎಂಬ ಪುಸ್ತಕ ಬರೆದಿದ್ದ ಸನಾತನ ಸಂಸ್ಥೆಯ ಸಂಸ್ಥಾಪಕರು, ಹಿಂದೂ ಧರ್ಮದ ವಿರುದ್ಧ ಮಾತನಾಡುವವರನ್ನು ‘ದುರ್ಜನ’ರು ಎಂದು ಕರೆದಿದ್ದರು. ಆ ತತ್ವವನ್ನು ಒಪ್ಪಿಕೊಳ್ಳುವವರನ್ನೆಲ್ಲ ಸೇರಿಸಿ 2010–11ರಲ್ಲಿ ಒಂದು ಜಾಲವನ್ನು ಕಟ್ಟಿದ್ದರು. ಆ ‘ದುರ್ಜನ’ರನ್ನು ಮುಗಿಸುವುದೇ ಜಾಲದ ಮುಖ್ಯ ಧ್ಯೇಯವಾಗಿತ್ತು ಎಂದು ಎಸ್‌ಐಟಿ ಪ್ರಕಟಣೆಯಲ್ಲಿ ತಿಳಿಸಿದೆ.

ಮೊದಲು ಇಎನ್‌ಟಿ ವೈದ್ಯ ವೀರೇಂದ್ರ ತಾವಡೆ ಅಲಿಯಾಸ್ ಬಡೇ ಬಾಯ್‌ಸಾಬ್ ಆ ಜಾಲವನ್ನು ಮುನ್ನಡೆಸುತ್ತಿದ್ದ. ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ಧಾಬೋಲ್ಕರ್ ಕೊಲೆ ಪ್ರಕರಣದಲ್ಲಿ ಸಿಬಿಐ ಆತನನ್ನು ಬಂಧಿಸಿದ ಬಳಿಕ, ಅಮೋಲ್ ಕಾಳೆ ಜಾಲವನ್ನು ಮುನ್ನಡೆಸುವ ಹೊಣೆ ಹೊತ್ತುಕೊಂಡಿದ್ದ. ಎಲ್ಲ ಕಾರ್ಯಗಳಿಗೂ ಶಶಿಕಾಂತ್ ರಾಣೆಯೇ ಹಣಕಾಸಿನ ಸಹಾಯ ಮಾಡುತ್ತಿದ್ದ.
ಇದೇ ಏಪ್ರಿಲ್‌ನಲ್ಲಿ ಆತ ಹೃದಯಾಘಾತದಿಂದಅಸುನೀಗಿದ ಎಂದುಎಸ್‌ಐಟಿ ಹೇಳಿದೆ.

‘ಅಮಿತ್ ದೆಗ್ವೇಕರ್‌ನನ್ನು ಬಂಧಿಸಿದಾಗ ಆತನ ಬಳಿ ನಾಲ್ಕು ಪಾಸ್‌ಬುಕ್‌ಗಳು ಸಿಕ್ಕಿದ್ದವು. ಅದರಲ್ಲಿನ ವಿವರಗಳನ್ನು ಪರಿಶೀಲಿಸಿದಾಗ, ರಾಣೆಯ ಬ್ಯಾಂಕ್ ಖಾತೆಯಿಂದಲೇ ದೆಗ್ವೇಕರ್‌ಗೆ ಹಣ ವರ್ಗಾವಣೆ ಆಗಿರುವುದು ಖಚಿತವಾಯಿತು. ಇದೇ ಕಾರಣಕ್ಕೆ ಸನಾತನ ಸಂಸ್ಥೆಯ ಹೆಸರನ್ನು ಆರೋಪಪಟ್ಟಿಯಲ್ಲಿ ತಂದಿದ್ದೇವೆ’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಮುಖರಿಗೆ ಶೋಧ: ಈಗಾಗಲೇ 16 ಮಂದಿಯನ್ನು ಬಂಧಿಸಿರುವ ಎಸ್‌ಐಟಿ, ಪ್ರಮುಖ ಆರೋಪಿಗಳಾದ ಮಹಾರಾಷ್ಟ್ರದ ವಿಕಾಸ್ ಪಟೇಲ್ ಅಲಿಯಾಸ್ ನಿಹಾಲ್ ಹಾಗೂ ಹೃಷಿಕೇಶ್ ದೇವಡೇಕರ್ ಅಲಿಯಾಸ್ ಮುರಳಿಬಂಧನಕ್ಕೆ ಬಲೆ ಬೀಸಿದ್ದಾರೆ. ‘ನಾಲ್ವರು
ವಿಚಾರವಾದಿಗಳ ಹತ್ಯೆಯಲ್ಲೂ ಇವರಿಬ್ಬರು ಪ್ರಮುಖ ಪಾತ್ರ ವಹಿಸಿದ್ದಾರೆ. ಇವರನ್ನು ಪತ್ತೆ ಮಾಡದೆ ಹೋದರೆ, ಹೊಸಬರನ್ನು ಸೇರಿಸಿ ಮತ್ತೆ ಜಾಲ ಕಟ್ಟುವುದರಲ್ಲಿ ಅನುಮಾನವಿಲ್ಲ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಎಸ್‌ಐಟಿ ಅಧಿಕಾರಿಗಳು.

ಆರೋಪಿಗಳು ನಮ್ಮವರಲ್ಲ’

‘ಈ ಪ್ರಕರಣದ ಆರೋಪಿಗಳ್ಯಾರೂ ಸನಾತನ ಸಂಸ್ಥೆಗೆ ಅಥವಾ ಹಿಂದೂ ಜನಜಾಗೃತಿ ಸಮಿತಿಗೆ ಸೇರಿದವರಲ್ಲ. ಕಾರಣವಿಲ್ಲದೇ ಸಂಸ್ಥೆಯ ಹೆಸರನ್ನು ತರಲಾಗಿದೆ. ಹಿಂದೆಯೂ ಇದೇ ರೀತಿ ಅವಮಾನಿಸುವಂತಹ ಪ್ರಯತ್ನಗಳು ನಡೆದಿದ್ದವು. ಗೌರಿ ಹತ್ಯೆಗೂ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ. ಈ ಸಂಬಂಧ ಯಾವುದೇ ತನಿಖೆಗೂ ಸಿದ್ಧರಿದ್ದೇವೆ. ವಿನಾ ಕಾರಣ ದೋಷ ಹೊರಿಸುವುದು ತಪ್ಪು’ ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಚೇತನ ರಾಜಹಂಸ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಈ ಪ್ರಕರಣದ ಆರೋಪಿಗಳ್ಯಾರೂ ಸನಾತನ ಸಂಸ್ಥೆಗೆ ಅಥವಾ ಹಿಂದೂ ಜನಜಾಗೃತಿ ಸಮಿತಿಗೆ ಸೇರಿದವರಲ್ಲ. ಕಾರಣವಿಲ್ಲದೇ ಸಂಸ್ಥೆಯ ಹೆಸರನ್ನು ತರಲಾಗಿದೆ. ಹಿಂದೆಯೂ ಇದೇ ರೀತಿ ಅವಮಾನಿಸುವಂತಹ ಪ್ರಯತ್ನಗಳು ನಡೆದಿದ್ದವು. ಗೌರಿ ಹತ್ಯೆಗೂ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ. ಈ ಸಂಬಂಧ ಯಾವುದೇ ತನಿಖೆಗೂ ಸಿದ್ಧರಿದ್ದೇವೆ. ವಿನಾ ಕಾರಣ ದೋಷ ಹೊರಿಸುವುದು ತಪ್ಪು’ ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಚೇತನ ರಾಜಹಂಸ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT