ಬೆಂಗಳೂರು: ‘ಆಧುನಿಕ ಜೀವನಕ್ಕೆ ಮಾರುಹೋಗಿರುವ ನಗರದ ಜನತೆ ಧಾರ್ಮಿಕ ಭಾವನೆಯಿಂದ ವಿಮುಖರಾಗುತ್ತಿದ್ದಾರೆ’ ಎಂದು ಮಾಚಿದೇವ ಅಧ್ಯಯನ ಪೀಠ ಮತ್ತು ಸಂಶೋಧನಾ ಟ್ರಸ್ಟ್ ಅಧ್ಯಕ್ಷೆ ವರದಾ ಶ್ರೀನಿವಾಸ್ ಕಳವಳ ವ್ಯಕ್ತಪಡಿಸಿದರು.
ಶ್ರೀ ಮಡಿವಾಳ ಮಾಚಿದೇವ ಧಾರ್ಮಿಕ ಟ್ರಸ್ಟ್ ಇಲ್ಲಿಮಂಗಳವಾರ ಆಯೋಜಿಸಿದ್ದ ಶ್ರೀ ಮಡಿವಾಳ ಮಾಚಿದೇವರ 65ನೇ ವರ್ಷದ ಜಯಂತಿ ಮಹೋತ್ಸವದಲ್ಲಿ ಅವರು ಮಾತನಾಡಿದರು.
‘12ನೇ ಶತಮಾನದಲ್ಲಿ ಜಾತಿ ಪದ್ಧತಿ ವಿರುದ್ಧಬಸವಣ್ಣನ ಜತೆಗೆ ಮಡಿವಾಳ ಮಾಚಿದೇವ ಸಹ ಸಮರ ಸಾರಿದ್ದರು. ವಚನಗಳನ್ನೇ ಅಸ್ತ್ರವನ್ನಾಗಿಸಿಕೊಂಡು ಸಮಾಜದಲ್ಲಿನ ಕುಂದು–ಕೊರತೆಗಳನ್ನು ಎತ್ತಿಹಿಡಿದಿದ್ದರು. ಅನುಭವ ಮಂಟಪದಲ್ಲಿ ಸದಾ ಕ್ರಿಯಾಶೀಲರಾಗಿದ್ದ ಅವರು ಬಸವಣ್ಣನನ್ನು ಆಗಾಗ ಎಚ್ಚರಿಸುವ ಕೆಲಸವನ್ನೂ ಮಾಡುತ್ತಿದ್ದರು. ಶಿವಶರಣರ ಬಟ್ಟೆಯನ್ನು ಒಗೆಯುವ ಕಾಯಕ ಇವರದ್ದಾಗಿತ್ತು. ಕಾಯಕ ತತ್ವಕ್ಕೆ ಬದ್ಧರಾಗಿದ್ಧ ಅವರು ನಿಷ್ಠೆಯಿಂದ ಕೆಲಸ ಮಾಡಿದರು. ನಿಷ್ಠೂರವಾದಿಯೂ ಆಗಿದ್ದರು. ಕಲ್ಯಾಣ ಅವರ ಕಾರ್ಯಕ್ಷೇತ್ರವಾಗಿತ್ತು’ ಎಂದು ಹೇಳಿದರು.
‘ಸಮಾಜ ಸುಧಾರಕರ ವಿಚಾರಧಾರೆಗಳನ್ನು ಸಮುದಾಯದ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಿದೆ. ಆದರೆ, ಬದಲಾದ ಸನ್ನಿವೇಶದಲ್ಲಿ ಧಾರ್ಮಿಕ ವಿಚಾರಧಾರೆಗಳ ಮಹತ್ವವನ್ನು ಅರಿತುಕೊಳ್ಳುವಲ್ಲಿ ಜನ ವಿಫಲರಾಗುತ್ತಿದ್ದಾರೆ. ಹೀಗೆ ಪರಿಸ್ಥಿತಿ ಮುಂದುವರೆದಲ್ಲಿ ನಮ್ಮ ಸಮುದಾಯ ಸಂಕಷ್ಟಕ್ಕೆ ಸಿಲುಕಲಿದೆ’ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮೊದಲು ಮಡಿತೇರು ಉತ್ಸವ ನಡೆಯಿತು. ನಂಜಪ್ಪ ಬ್ಲಾಕ್ನಿಂದ ಶ್ರೀ ಮಡಿವಾಳ ಮಾಚಿದೇವ ದೇವಸ್ಥಾನದವರೆಗೆ ಮಾಚಿದೇವರ ಉತ್ಸವ ಮೂರ್ತಿಯ ಮೆರವಣಿಗೆ ಮಂಗಳವಾದ್ಯಗಳೊಂದಿಗೆ ಅದ್ಧೂರಿಯಾಗಿ ನಡೆಯಿತು.