ಮಹದೇವಪುರ: ಸಾಮಾಜಿಕ ಕಾರ್ಯಕರ್ತ ಎಂ.ವೇಣುಗೋಪಾಲ ಅವರುಬೆಂಗಳೂರು ಪೂರ್ವ ತಾಲ್ಲೂಕು ತಿಗಳರ ಕ್ಷೇಮಾಭಿವೃದ್ಧಿ ಸಂಘದ ಕಟ್ಟಡ ನಿರ್ಮಾಣಕ್ಕೆ 2,400 ಅಡಿಗಳ ವಿಸ್ತೀರ್ಣದ ಜಾಗವನ್ನು ಗುರುವಾರ ದಾನ ಮಾಡಿದರು.
‘ಬುದ್ಧಿಜೀವಿಯಾಗಿರುವ ಮನುಷ್ಯನಿಗೆ ಎಷ್ಟೇ ಶ್ರೀಮಂತರಾದರೂ ಹಂಚಿ ತಿನ್ನುವ ಹಾಗೂ ಪರರಿಗೆ ದಾನ ಮಾಡುವ ಗುಣ ಇಲ್ಲದಿದ್ದರೆ ಭೂಮಿಯ ಮೇಲೆ ಬದುಕಿದ್ದು ವ್ಯರ್ಥ’ ಎಂದುಎಂ.ವೇಣುಗೋಪಾಲ ಹೇಳಿದರು.
‘ಸ್ವಾರ್ಥ ಸಾಧನೆಯಿಂದ ಜೀವನದಲ್ಲಿ ತೃಪ್ತಿ ಇರುವುದಿಲ್ಲ. ಹಾಗಾಗಿ ಪ್ರತಿಯೊಬ್ಬರು ದಾನ ಮಾಡುವ ಗುಣ ಮೈಗೂಡಿಸಿಕೊಳ್ಳಬೇಕು’ ಎಂದರು.
‘ಪಶು–ಪಕ್ಷಿಗಳಲ್ಲಿ ಪರಸ್ಪರ ಹಂಚಿಕೊಂಡು ತಿನ್ನುವ ಗುಣ ಇರುತ್ತದೆ. ಅದು ಕೂಡ ದಾನ ಗುಣವಾಗಿದೆ. ಪ್ರತಿಯೊಬ್ಬ ಮನುಷ್ಯರು ತಮ್ಮ ಕೈಲಾದಷ್ಟು ಇಲ್ಲದವರಿಗೆ ದಾನ ಮಾಡಬೇಕು’ ಎಂದು ಅವರು ತಿಳಿಸಿದರು.
‘ತಿಗಳರ ಜನಾಂಗ ಕೃಷಿಯನ್ನೇ ನಂಬಿದೆ. ರಾಜಕೀಯವಾಗಿ, ಸಾಮಾಜಿಕವಾಗಿ ಬಲಿಷ್ಠವಾಗಲು ಸಾಧ್ಯವಾಗುತ್ತಿಲ್ಲ. ಸಮುದಾಯದ ಯುವಕರು ಶೈಕ್ಷಣಿಕವಾಗಿ ಮುಂದುವರೆಯಬೇಕು’ ಎಂದು ಅವರು ಆಶಿಸಿದರು.