ಬೆಂಗಳೂರು: ಅತೃಪ್ತ ಶಾಸಕರ ಬಣದಲ್ಲಿ ಗುರುತಿಸಿಕೊಂಡಿದ್ದ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಗುರುವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಕುಮಾರಸ್ವಾಮಿ ರಹಸ್ಯವಾಗಿ ರಣತಂತ್ರ ಹೆಣೆಯುತ್ತಿದ್ದಾರೆ ಎಂಬ ವದಂತಿ ಮಧ್ಯೆ ನಡೆದ ಈ ಭೇಟಿ ಕುತೂಹಲ ಮೂಡಿಸಿದೆ.
ಅತೃಪ್ತ ಶಾಸಕರ ಬಣದ ನೇತೃತ್ವ ವಹಿಸಿದ್ದ ಗೋಕಾಕದ ಕಾಂಗ್ರೆಸ್ ಶಾಸಕ ರಮೇಶ ಜಾರಕಿಹೊಳಿ, ತಮ್ಮ ಆಪ್ತ ಶಾಸಕರ ಜೊತೆ ರಾಜೀನಾಮೆ ನೀಡುವುದಾಗಿ ಇತ್ತೀಚೆಗೆ ಹೇಳಿದ್ದರು. ಆ ಬೆನ್ನಲ್ಲೆ, ರಮೇಶ ಅವರನ್ನು ಭೇಟಿ ಮಾಡಿದ್ದ ಕುಮಾರಸ್ವಾಮಿ, ಅತೃಪ್ತಿ ಶಮನಗೊಳಿಸುವಲ್ಲಿ ಸಫಲರಾಗಿದ್ದರು.
ಚೆಲುವರಾಯಸ್ವಾಮಿ ಜೊತೆ ಸಿದ್ದರಾಮಯ್ಯ ಚರ್ಚೆ:
ಮಂಡ್ಯ ಕಾಂಗ್ರೆಸ್ ನಾಯಕ ಚೆಲುವರಾಯಸ್ವಾಮಿ ಅವರನ್ನು ತಮ್ಮ ಕಾವೇರಿ ನಿವಾಸಕ್ಕೆ ಕರೆಸಿಕೊಂಡು ಸಿದ್ದರಾಮಯ್ಯ ಕೆಲಹೊತ್ತು ಮಾತುಕತೆ ನಡೆಸಿದರು.
ಮಂಡ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಗುರುವಾರ ಮಾತನಾಡುವ ವೇಳೆ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿರುವ ಹಿನ್ನೆಲೆಯಲ್ಲಿ ಚೆಲುವರಾಯಸ್ವಾಮಿ ಜೊತೆ ಸಿದ್ದರಾಮಯ್ಯ ವಿಷಯ ಪ್ರಸ್ತಾಪಿಸಿ ದ್ದಾರೆ ಎಂದು ಗೊತ್ತಾಗಿದೆ.
ತುಮಕೂರು ಕ್ಷೇತ್ರದ ಟಿಕೆಟ್ ವಂಚಿತ ಮುದ್ದಹನುಮೇಗೌಡ, ಸಚಿವ ವೆಂಕಟರಮಣಪ್ಪ ಕೂಡಾ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.