ಬೆಂಗಳೂರು: ನಗರದ ಮಾರುಕಟ್ಟೆಗಳಲ್ಲಿಕಳೆದ ಕೆಲವೇ ದಿನಗಳಿಂದ ತರಕಾರಿ ಹಾಗೂ ಹಣ್ಣುಗಳ ಬೆಲೆ ಏರಿಕೆ ಕಾಣುತ್ತಿದೆ. ಯುಗಾದಿಗೆ ಮುನ್ನವೇ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಯುಗಾದಿ ಹಬ್ಬದ ಹೊತ್ತಿಗೆ ದರ ಮತ್ತಷ್ಟು ಹೆಚ್ಚಳವಾಗುವ ಲಕ್ಷಣ ಕಾಣಿಸುತ್ತಿದೆ.
ಬಿಸಿಲಿನ ಪರಿಣಾಮದಿಂದಾಗಿ ತರಕಾರಿ ದರ ದಿಢೀರ್ ಏರಿಕೆಯಾಗಿದ್ದು, ವಿಜಯನಗರ ಮಾರುಕಟ್ಟೆಯಲ್ಲಿ ಭಾನುವಾರ ಹುರುಳಿಕಾಯಿ, ನುಗ್ಗೇಕಾಯಿ ಕೆ.ಜಿ.ಗೆ ತಲಾ ₹150 ಹಾಗೂ ಸೇಬು₹180ರಂತೆ ಮಾರಾಟವಾಗುತ್ತಿದ್ದರೆ, ಹಾಪ್ಕಾಮ್ಸ್ನಲ್ಲಿ ಸೇಬು(ಚಿಲ್ಲಿ) ₹136ಕ್ಕೆ ಮಾರಾಟವಾಗುತ್ತಿದೆ.
‘ಬಿಸಿಲಿನ ತಾಪಮಾನ ಏರಿಕೆಯಾಗಿರುವುದರಿಂದ ಬಹುತೇಕ ನುಗ್ಗೇ ಗಿಡಗಳು ಸೊರಗುತ್ತಿವೆ. ಎಳೆ ಕಾಯಿಯೂ ಸಿಗುವುದು ಕಷ್ಟ. ಪೂರೈಕೆ ಪ್ರಮಾಣವೂ ತೀರ ಕಡಿಮೆ ಇದೆ. ಹಾಗಾಗಿ, ಪ್ರತಿ ಕೆ.ಜಿಗೆ ₹100 ದರವಿದ್ದ ನುಗ್ಗೇಕಾಯಿ ದರ ಇದೀಗ ₹150 ತಲುಪಿದೆ’ ಎನ್ನುತ್ತಾರೆ ವ್ಯಾಪಾರಿ ಯಲ್ಲಮ್ಮ.
ಸೊಪ್ಪಿನ ದರ ಏರಿಕೆ: ಕೊತ್ತಂಬರಿ ಸೊಪ್ಪಿನ ದರ 15 ದಿನಗಳಿಂದಲೂ ಏರುತ್ತಾ ಬಂದಿದ್ದು, ಒಂದು ಕಟ್ಟಿಗೆ ₹20 ರಿಂದ ₹30ಕ್ಕೆ ಮಾರಾಟವಾಗುತ್ತಿದೆ. ಕಳೆದ ವಾರ ₹ 20ರಿಂದ ₹ 25ಕ್ಕೆ ಮಾರಾಟವಾಗುತ್ತಿತ್ತು. ಇನ್ನುಳಿದಂತೆ ಮೆಂತೆ, ಸಬ್ಬಸಿಗೆ ಸೊಪ್ಪಿನ ದರದಲ್ಲೂ ಕೊಂಚ ಏರಿಕೆಯಾಗಿದೆ.