ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತ ಅಧಿಕಾರಿ, ನಾಲ್ವರು ರೌಡಿಶೀಟರ್‌ಗಳ ಸೆರೆ

ಜೈಲಿನಲ್ಲಿ ಪರಿಚಯವಾದ ರೌಡಿಗಳೇ ಕಟ್ಟಿಕೊಂಡಿದ್ದ ಗ್ಯಾಂಗ್: ಚೆಕ್‌ ತಿದ್ದಿ ಲಕ್ಷಾಂತರ ರೂಪಾಯಿ ವಂಚನೆ
Last Updated 10 ಮಾರ್ಚ್ 2019, 19:44 IST
ಅಕ್ಷರ ಗಾತ್ರ

ಬೆಂಗಳೂರು: ಅಸಲಿ ಚೆಕ್‌ಗಳನ್ನು ಕದ್ದು ಅದರ ವಿವರವನ್ನು ತಿದ್ದಿ ಬ್ಯಾಂಕ್‌ಗೆ ಕೊಟ್ಟು ಲಕ್ಷಾಂತರ ರೂಪಾಯಿ ವರ್ಗಾಯಿಸಿಕೊಂಡು ವಂಚಿಸುತ್ತಿದ್ದ ಜಾಲವನ್ನು ಭೇದಿಸಿರುವ ವಿಧಾನಸೌಧ ಪೊಲೀಸರು, ರೌಡಿಶೀಟರ್‌ಗಳು ಹಾಗೂನಿವೃತ್ತ ಸರ್ಕಾರಿ ಅಧಿಕಾರಿ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ.

ನಿವೃತ್ತ ಸರ್ಕಾರಿ ಅಧಿಕಾರಿ ಜಿ.ಎಸ್. ಶ್ರೀಪಾದ್, ಅವರ ಮಗ ಆನಂದತೀರ್ಥ, ಹರೀಶ್, ರೌಡಿಗಳಾದ ಪ್ರಶಾಂತ್, ಪ್ರತಾಪ್, ವೆಂಕಟೇಶ್ ಬಂಧಿತರು. ಜಾಲದ ರೂವಾರಿ ರೌಡಿ ನವೀನ್ ಹಾಗೂ ಆತನ ಸಹಚರ ರಾಜೇಶ್ ಶೆಟ್ಟಿ ತಲೆಮರೆಸಿಕೊಂಡಿದ್ದಾರೆ.

‘ತ್ಯಾಗರಾಜನಗರ ನಿವಾಸಿಯಾದ ಶ್ರೀಪಾದ್, ಸೇವೆಯಿಂದ ನಿವೃತ್ತರಾದ ಬಳಿಕ ಕಮಿಷನ್ ಆಧಾರದಲ್ಲಿ ಚೆಕ್‌ ಕ್ಲಿಯರೆನ್ಸ್ ಮಾಡಿಸಿಕೊಡುವ ಕೆಲಸ ಮಾಡುತ್ತಿದ್ದರು. ಹೆಚ್ಚೆಚ್ಚು ಗ್ರಾಹಕರು ಅವರ ಬಳಿ ಬಂದು ಚೆಕ್‌ ಕೊಟ್ಟು ಹಣ ಪಡೆದುಕೊಂಡು ಹೋಗುತ್ತಿದ್ದರು. ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ಮಗ ಆನಂದ್ ಸಹ ಅವರ ಕೆಲಸಕ್ಕೆ ಸಹಾಯ ಮಾಡುತ್ತಿದ್ದ’ ಎಂದು ವಿಧಾನಸೌಧ ಪೊಲೀಸರು ಹೇಳಿದರು.

‘ಆನಂದ್‌ನನ್ನು ಸಂಪ‍ರ್ಕಿಸಿದ್ದ ಆರೋಪಿ ಹರೀಶ್, ‘ಎಕೆಸಿಟಿ ಚಿದಂಬರಂ ಕಾಟನ್ ಮಿಲ್ ಕಂಪನಿ’ಗೆ ಸೇರಿದ್ದ ಚೆಕ್‌ ಕೊಟ್ಟು ಹಣ ಡ್ರಾ ಮಾಡಿಕೊಡುವಂತೆ ಕೋರಿದ್ದ. ಹೆಚ್ಚು ಕಮಿಷನ್ ಕೊಡುವುದಾಗಿ ಆಮಿಷವೊಡ್ಡಿದ್ದ. ಅದರಂಥೆ ಆನಂದ್, ತಂದೆ ಕಡೆಯಿಂದ ವಿಧಾನಸೌಧದ ಎಸ್‌ಬಿಐ ಶಾಖೆಗೆ ಚೆಕ್‌ ಹಾಕಿಸಿದ್ದ’.

‘₹57,750 ಮೊತ್ತದ ಚೆಕ್‌ನ್ನು ತಿದ್ದಿ ₹5,77,500 ಎಂದು ನಮೂದಿಸಲಾಗಿತ್ತು. ಅದನ್ನೇ ಶ್ರೀಪಾದ್, ಶಾಖೆಗೆ ಕೊಟ್ಟು ತಮ್ಮ ಖಾತೆಗೆ ಜಮೆ ಮಾಡುವಂತೆ ಹೇಳಿದ್ದರು. ಚೆಕ್ ನಕಲಿ ಎಂಬುದನ್ನು ಪತ್ತೆ ಹಚ್ಚಿದ್ದ ಬ್ಯಾಂಕ್‌ ಮುಖ್ಯ ವ್ಯವಸ್ಥಾಪಕ ಅಶೋಕ ರಾಮಮೂರ್ತಿ ದೂರು ನೀಡಿದ್ದರು. ಅದರ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ವಿಧಾನಸೌಧ ಪೊಲೀಸರು ಹೇಳಿದರು.

ರೌಡಿಗಳೇ ಕಟ್ಟಿಕೊಂಡಿದ್ದ ಗ್ಯಾಂಗ್‌
‘ಕುಂದಾಪುರದ ಪ್ರಶಾಂತ್, ಕುಂಬಳಗೋಡಿನ ಪ್ರತಾಪ್, ವೆಂಕಟೇಶ್ ಹಾಗೂ ನವೀನ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಪರಿಚಯವಾಗಿ ಸ್ನೇಹಿತರಾಗಿದ್ದರು.ಜಾಮೀನಿನ ಮೇಲೆ ಹೊರಬಂದ ಅವರು ತಮ್ಮದೇ ಗ್ಯಾಂಗ್‌ ಕಟ್ಟಿಕೊಂಡು ಚೆಕ್‌ ತಿದ್ದುವ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

‘ರೌಡಿ ನವೀನ್‌, ಜಾಲದ ರೂವಾರಿ. ಬ್ಯಾಂಕಿಂಗ್‌ ವ್ಯವಹಾರಗಳ ಬಗ್ಗೆ ಜ್ಞಾನ ಹೊಂದಿದ್ದ ಆತನಿಗೆ ಚೆಕ್‌ ತಿದ್ದುವ ಬಗ್ಗೆ ಗೊತ್ತಿತ್ತು. ಆತನ ಮಾತು ಕೇಳಿಯೇ ಇತರೆ ಆರೋಪಿಗಳು ಕೃತ್ಯಕ್ಕೆ ಕೈ ಜೋಡಿಸಿದ್ದರು. ಬಂದ ಹಣವನ್ನು ಹಂಚಿಕೊಳ್ಳುತ್ತಿದ್ದರು’ ಎಂದು ವಿವರಿಸಿದರು.

ಗಮನ ಬೇರೆಡೆ ಸೆಳೆದು ಚೆಕ್‌ ಕಳವು
‘ಕಂಪನಿಗಳು ಹಾಗೂ ಖಾಸಗಿ ವ್ಯಕ್ತಿಗಳು, ತಮ್ಮೊಂದಿಗೆ ವ್ಯವಹಾರ ಮಾಡುತ್ತಿದ್ದವರಿಗೆ ಚೆಕ್ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದರು. ಅಂಥ ಚೆಕ್‌ಗಳನ್ನು ಕೋರಿಯರ್ ಮೂಲಕ ಸಂಬಂಧಪಟ್ಟ ಕಂಪನಿ ಹಾಗೂ ವ್ಯಕ್ತಿಗಳಿಗೆ ಕಳುಹಿಸಿಕೊಡುತ್ತಿದ್ದರು. ಆ ಮಾಹಿತಿ ತಿಳಿದುಕೊಳ್ಳುತ್ತಿದ್ದ ಆರೋಪಿಗಳು, ಕೊರಿಯರ್ ಬಾಯ್‌ಗಳ ಗಮನ ಬೇರೆಡೆ ಸೆಳೆದು ಚೆಕ್‌ಗಳನ್ನು ಕದಿಯುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಕದ್ದ ಚೆಕ್‌ಗಳ ವಿವರಗಳನ್ನು ತಿದ್ದಿ ಬ್ಯಾಂಕ್‌ಗೆ ಕೊಡುತ್ತಿದ್ದರು. ಅದು ನಿಜವೆಂದು ನಂಬಿ ಬ್ಯಾಂಕ್‌ನವರು, ಹಣ ವರ್ಗಾವಣೆ ಮಾಡುತ್ತಿದ್ದರು. ಆರೋಪಿಗಳು ಇದುವರೆಗೆ ಯಾವ್ಯಾವ ಬ್ಯಾಂಕ್‌ ಹಾಗೂ ಗ್ರಾಹಕರಿಗೆ ವಂಚಿಸಿದ್ದಾರೆ ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ’ ಎಂದರು.

ತಮಿಳುನಾಡಿನಲ್ಲೂ ಕೃತ್ಯ
‘ರಾಜ್ಯದಲ್ಲಿ ಕೃತ್ಯ ಎಸಗಿದರೆ ಪೊಲೀಸರು ಬೇಗನೇ ಬಂಧಿಸುತ್ತಾರೆ’ ಎಂದುಕೊಂಡಿದ್ದ ಆರೋಪಿಗಳು, ಆರಂಭದಲ್ಲಿ ತಮಿಳುನಾಡಿನಲ್ಲಿ ಕೃತ್ಯ ಎಸಗಲಾರಂಭಿಸಿದ್ದರು.

‘ಅಣ್ಣಾ ಸಾಲೈ ಪೊಲೀಸ್ ಠಾಣಾ ವ್ಯಾಪ್ತಿಯ ಶಾಸ್ತ್ರಿ ಭವನದ ಬಳಿ ಕೊರಿಯರ್ ಬಾಯ್ ಗಮನ ಬೇರೆಡೆ ಸೆಳೆದು ವಿವಿಧ ಕಂಪನಿಗಳಿಗೆ ಸೇರಿದ್ದ ಚೆಕ್‌ಗಳನ್ನು ಕದ್ದಿದ್ದರು. ಆ ಚೆಕ್‌ಗಳ ವಿವರಗಳನ್ನು ತಿದ್ದಿ ಬ್ಯಾಂಕ್‌ಗಳಿಗೆ ಕೊಟ್ಟು ಹಣ ಡ್ರಾ ಮಾಡಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

‘ಚೆಕ್‌ ಬಗ್ಗೆ ಅನುಮಾನಗೊಂಡಿದ್ದ ಬ್ಯಾಂಕ್‌ ಅಧಿಕಾರಿಯೊಬ್ಬರು,ಅಣ್ಣಾ ಸಾಲೈ ಠಾಣೆಗೆ ದೂರು ನೀಡಿದ್ದರು. ಪೊಲೀಸರು, ಆರೋಪಿಗಳ ಸ್ಥಳವನ್ನು ಪತ್ತೆ ಹಚ್ಚಿ ಬಂಧಿಸಲು ಹೋಗಿದ್ದರು. ಆಗ ಆರೋಪಿಗಳೆಲ್ಲರೂ ತಪ್ಪಿಸಿಕೊಂಡಿದ್ದರು. ಆದರೆ, ವೆಂಕಟೇಶ್ ಎಂಬಾತ ತಪ್ಪಿಸಿಕೊಳ್ಳುವ ಅವಸರದಲ್ಲಿ ಬೈಕ್‌ನಿಂದ ಬಿದ್ದು ಕೈ ಮುರಿದುಕೊಂಡು ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಆತನೇ ಜಾಲದ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದ. ಉಳಿದ ಆರೋಪಿಗಳು ಬೆಂಗಳೂರಿಗೆ ಬಂದು ಕೃತ್ಯ ಮುಂದುವರಿಸಿದ್ದರು. ಈಗ ನಮಗೆ ಸಿಕ್ಕಿಬಿದ್ದಿದ್ದಾರೆ’ ಎಂದು ತಿಳಿಸಿದರು.

ಚೆಕ್ ತಿದ್ದಲು ರಾಸಾಯನಿಕ ಬಳಕೆ
‘ಚೆಕ್‌ ವಿವರ ತಿದ್ದುವುದಕ್ಕಾಗಿ ಆರೋಪಿಗಳು ರಾಸಾಯನಿಕ ಬಳಸುತ್ತಿದ್ದರು. ಆ ಬಗ್ಗೆ ಬಂಧಿತ ಆರೋಪಿಗಳು ಹೇಳಿಕೆ ನೀಡಿದ್ದು, ಆ ರಾಸಾಯನಿಕ ಯಾವುದು ಎಂಬುದು ರೌಡಿ ನವೀನ್‌ಗೆ ಮಾತ್ರ ಗೊತ್ತಿದೆ. ಆತ ಸಿಕ್ಕ ಬಳಿಕ ರಾಸಾಯನಿಕದ ಹೆಸರು ತಿಳಿಯಲಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT