ಬೆಂಗಳೂರು: ‘ಚಿತ್ರನಟ ಯಶ್ ಕುಟುಂಬದವರು ನಮ್ಮ ಮನೆಯನ್ನು ವಾಸಕ್ಕೆ ಯೋಗ್ಯವಲ್ಲದ ರೀತಿಯಲ್ಲಿ ಹಾಳು ಮಾಡಿದ್ದಾರೆ’ ಎಂದು ಆರೋಪಿಸಿರುವ ಮಾಲೀಕರು, ತಮಗೆ ಹಾಗೂ ಮನೆಗೆ ರಕ್ಷಣೆ ನೀಡುವಂತೆ ಗಿರಿನಗರ ಪೊಲೀಸರಿಗೆ ಶನಿವಾರ ಅರ್ಜಿ ಸಲ್ಲಿಸಿದ್ದಾರೆ.
ಬನಶಂಕರಿ ಮೂರನೇ ಹಂತದ 6ನೇ ಕ್ರಾಸ್ನಲ್ಲಿದ್ದ ಬಾಡಿಗೆ ಮನೆಯನ್ನು ಯಶ್ ಕುಟುಂಬ ಶುಕ್ರವಾರವಷ್ಟೇ ಖಾಲಿ ಮಾಡಿತ್ತು.
‘ಮನೆಯ ಕೆಲ ಭಾಗಗಳಿಗೆ ಧಕ್ಕೆ ಉಂಟು ಮಾಡಲಾಗಿದ್ದು, ₹ 20 ಲಕ್ಷಕ್ಕಿಂತ ಹೆಚ್ಚು ಹಾನಿ ಆಗಿದೆ. ಆ ಬಗ್ಗೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಿದ್ದೇವೆ’ ಎಂದು ಮಾಲೀಕರು ಪೊಲೀಸರಿಗೆ ಹೇಳಿದ್ದಾರೆ.
ಆ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ‘ಮಾಲೀಕರು ನೀಡಿರುವ ಅರ್ಜಿ ಆಧರಿಸಿ ಎನ್ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿಕೊಳ್ಳಲಾಗಿದೆ. ಮನೆಗೂ ರಕ್ಷಣೆ ನೀಡಲಾಗಿದೆ’ ಎಂದು ಹೇಳಿದರು.