ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಹೊರವಲಯದಲ್ಲಿ ಗುರುವಾರ ತಡರಾತ್ರಿ ನಡೆದ ಎನ್ಕೌಂಟರ್ನಲ್ಲಿ ಸಿಆರ್ಪಿಎಫ್ ಮುಖ್ಯ ಪೇದೆ ಮತ್ತು ಉಗ್ರರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಉಗ್ರ ಜಹೀದ್ ದಾಸ್ ಎಂಬಾತನನ್ನು ಕೊಲ್ಲಲಾಗಿದೆ. ಈತ ಕಳೆದ ವಾರ ಅನಂತ್ನಾಗದಲ್ಲಿ ಆರು ವರ್ಷದ ಬಾಲಕ, ನಾಗರಿಕರೊಬ್ಬರು ಮತ್ತು ಸಿಆರ್ಪಿಎಫ್ ಯೋಧನನ್ನು ಗುಂಡಿಕ್ಕಿ ಕೊಂದಿದ್ದ ಎಂದು ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿ ತಿಳಿಸಿದ್ದಾರೆ.
— Kashmir Zone Police (@KashmirPolice) June 26, 2020
ಹಜರತ್ಬಾಲ್ ದೇಗುಲದ ಸಮೀಪವಿರುವ ಮಾಲ್ಬಾಗ್ ಎಂಬಲ್ಲಿ ಈ ಎನ್ಕೌಂಟರ್ ನಡೆದಿದೆ. ಗುಪ್ತಚರ ಇಲಾಖೆ ನೀಡಿದ ಮಾಹಿತಿ ಮೇಲೆ ಭದ್ರತಾ ಪಡೆಗಳು ಈ ಕಾರ್ಯಾಚರಣೆ ನಡೆಸಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತಾ ಪಡೆಗಳು ಶೋಧ ನಡೆಸುತ್ತಿದ್ದ ಸಂದರ್ಭದಲ್ಲಿ ಅವರ ಮೇಲೆ ಉಗ್ರರು ಏಕಾಏಕಿ ಗುಂಡಿನ ದಾಳಿ ಆರಂಭಿಸಿದ್ದರು. ಆಗ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದವು. ಈ ವೇಳೆ ಜಹೀದ್ ದಾಸ್ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆ ವೇಳೆ ಮೂವರು ಸಿಆರ್ಪಿಎಫ್ ಯೋಧರು ಆರಂಭದಲ್ಲಿ ಗಾಯಗೊಂಡಿದ್ದರು. ಅವರನ್ನು ‘92 ಬೇಸ್ ಆರ್ಮಿ’ ಆಸ್ಪತ್ರೆಗೆ ಸೇರಿಸಲಾಯಿತು. ಅವರ ಪೈಕಿ ಕುಲದೀಪ್ ಉರಾವನ್ ಎಂಬ ಹೆಡ್ ಕಾನ್ಸ್ಟೆಬಲ್ ತೀವ್ರ ಗಾಯಗಳಿಂದಾಗಿ ಮೃತಪಟ್ಟಿದ್ದಾರೆ.
ಸ್ಥಳದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಉಗ್ರರಿರುವ ಕುರಿತ ಗುಪ್ತಚರ ಇಲಾಖೆ ಮಾಹಿತಿ ಹಿನ್ನೆಲೆಯಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಸದ್ಯ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿವೆ.