ಜೈಪುರ: ರಾಜ್ಯ ಸರ್ಕಾರವನ್ನು ಉರುಳಿಸಲು ನಡೆದಿರುವ ಪ್ರಯತ್ನಗಳ ಕುರಿತು ಹೇಳಿಕೆಯನ್ನು ದಾಖಲಿಸುವಂತೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರಿಗೆ ರಾಜಸ್ಥಾನ ಪೊಲೀಸರು ಶನಿವಾರ ನೋಟಿಸ್ ನೀಡಿದ್ದಾರೆ.
ವಿಶೇಷ ಕಾರ್ಯಾಚರಣೆ ಪಡೆಯು (ಎಸ್ಒಜಿ) ಈಗಾಗಲೇ ಆಡಳಿತ ಪಕ್ಷದ ಮುಖ್ಯ ಸಚೇತಕ (ಚೀಫ್ ವಿಪ್) ಮಹೇಶ್ ಜೋಶಿ ಅವರಿಗೆ ನೋಟಿಸ್ ನೀಡಿದೆ.
ಗೆಹ್ಲೋಟ್ ಅವರ ಸರ್ಕಾರವನ್ನು ಉರುಳಿಸಲು ಕಾಂಗ್ರೆಸ್ ಶಾಸಕರ ಖರೀದಿಗೆ ಕುದುರೆ ವ್ಯಾಪಾರ ನಡೆಸಿದ್ದರೆಂಬ ಆರೋಪದ ಮೇರೆಗೆ ಇಬ್ಬರು ವ್ಯಕ್ತಿಗಳ ವಿರುದ್ಧ ಎಸ್ಇಜಿಯು ಪ್ರಕರಣ ದಾಖಲಿಸಿ ವಶಕ್ಕೆ ಪಡೆದಿದೆ.
ಇನ್ನು 12ಕ್ಕೂ ಹೆಚ್ಚು ಶಾಸಕರಿಗೆ ನೋಟಿಸ್ ನೀಡಲಾಗುವುದು ಎಂದು ‘ಪಿಟಿಐ’ಗೆ ಮೂಲಗಳು ತಿಳಿಸಿವೆ. ಆದರೆ, ಶಾಸಕರ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಲಾಗಿದೆ. ಕುದುರೆ ವ್ಯಾಪಾರದಲ್ಲಿ ತೊಡಗಿರುವವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಭ್ರಷ್ಟಾಚಾರ ನಿಗ್ರಹ ವಿಭಾಗ ತನಿಖೆ ನಡೆಸಲಿದೆ.
ಪ್ರಕರಣದಲ್ಲಿ ಬಂಧಿತರಾದವರು ಉದಯಪುರ, ಅಜ್ಮೀರ್ ಮೂಲದವರಾಗಿದ್ದಾರೆ ಎಂದು ಎಂದು ಎಸ್ಒಜಿ ಹೇಳಿದೆ.