ಗುವಾಹಟಿ: ಅಸ್ಸಾಂನಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದಾಗಿ 30 ಜಿಲ್ಲೆಗಳಲ್ಲಿ ಸಾಕಷ್ಟು ಹಾನಿಯಾಗಿದ್ದು, 56 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. 102 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ಪ್ರವಾಹ ಸಂತ್ರಸ್ತರಿಗಾಗಿ 615 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಕಾಜಿರಂಗ ರಾಷ್ಟ್ರೀಯ ಉದ್ಯಾನ ಹಾಗೂ ಹುಲಿ ಸಂರಕ್ಷಿತರಾಣ್ಯ ಪ್ರದೇಶದಲ್ಲಿ 132 ಪ್ರಾಣಿಗಳು ಮೃತಪಟ್ಟಿರುವುದಾಗಿ ವರದಿಯಾಗಿದೆ.
‘ಪ್ರವಾಹದಲ್ಲಿ ಸಿಲುಕಿ ಕಾಜಿರಂಗ ರಾಷ್ಟ್ರೀಯ ಉದ್ಯಾನ ಹಾಗೂ ಹುಲಿ ಸಂರಕ್ಷಿತಾರಣ್ಯದ132 ಪ್ರಾಣಿಗಳು ಮೃತಪಟ್ಟಿವೆ. ಇದರಲ್ಲಿ 14 ಘೇಂಡಾಮೃಗಗಳು, 5 ಕಾಡು ಎಮ್ಮೆಗಳು, 8 ಕಾಡುಹಂದಿಗಳು, 101 ಜಿಂಕೆಗಳು, ಮೂರು ಮುಳ್ಳುಹಂದಿಗಳು ಹಾಗೂ 1 ಹೆಬ್ಬಾವು ಮೃತಪಟ್ಟಿವೆ’ ಎಂದು ಅಸ್ಸಾಂ ಸರ್ಕಾರ ಮಾಹಿತಿ ನೀಡಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯ (ಎನ್ಡಿಆರ್ಎಫ್) ಒಂದು ತಂಡ ಪ್ರವಾಹ ಪೀಡಿತ ಬಾರ್ಪೆಟಾ ಜಿಲ್ಲೆಯ ದಿಘಿರ್ಪಾಮ್ ಬಜಾರ್ ಪ್ರದೇಶದಿಂದ ಜನ–ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಭಾನುವಾರ ಸ್ಥಳಾಂತರಿಸಿದೆ.